ಬೆಂಗಳೂರು:‘ಪತ್ರಕರ್ತರು ಮತ್ತು ನ್ಯಾಯಾಧೀಶರು ನಿಷ್ಪಕ್ಷಪಾತರಾಗಿ ಕೆಲಸ ಮಾಡಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅಭಿಪ್ರಾಯಪಟ್ಟರು.
ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ನಡೆದ 'ನ್ಯಾಯಾಂಗ ಮತ್ತು ಮಾಧ್ಯಮ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ನ್ಯಾಯಾಂಗ ಮತ್ತು ಪತ್ರಿಕೋದ್ಯಮದ ಪಾತ್ರ ಹಿರಿದಾಗಿದ್ದು, ಅದನ್ನು ಅರಿತು ನಾವು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂವಾದದಲ್ಲಿ ಮಾಧ್ಯಮ ಮತ್ತು ನ್ಯಾಯಾಂಗದ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಪಾದಕತ್ವದಲ್ಲಿ ಹೊರತರುವ ಕಾಲೇಜಿನ ಪತ್ರಿಕೆ 'ದಿ ಎನ್ ಸಿಜೆ ಟೈಮ್ಸ್' ಹಾಗೂ ಚನ್ನಪಟ್ಟಣ ಗೊಂಬೆಗಳ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ನ್ಯಾಷನಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್ ಎನ್. ನಾಗರಾಜ ರೆಡ್ಡಿ, ಪ್ರಾಂಶುಪಾಲರಾದ ಡಾ.ವೈ.ಸಿ.ಕಮಲ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್. ಜಯಸಿಂಹ, ಡಾ. ವೈಶಾಲಿ ಎಚ್.ಬಿ. ಇದ್ದರು.