ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಕಾಲು–ಬಾಯಿ ಜ್ವರ ಹೈನುಗಾರಿಕೆ ಮಾಡುವವರಿಗೆ ಕಂಟಕವಾಗಿ ಪರಿಣಮಿಸಿದೆ. ಈ ಬಗ್ಗೆ ಜನರು ಜಾಗೃತರಾಗಿ ತಮ್ಮ ಹಸುಗಳಿಗೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯ ಇದೆ’ ಎಂದು ಬಿಬಿಎಂಪಿಯ ದೊಮ್ಮಲೂರು ವಾರ್ಡ್ ಸದಸ್ಯ ಲಕ್ಷ್ಮೀನಾರಾಯಣ ಸಲಹೆ ನೀಡಿದರು.
ದೊಮ್ಮಲೂರು ವಾರ್ಡ್ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಕಾಲು–ಬಾಯಿ ಜ್ವರ’ ಜಾಗೃತಿ ಮತ್ತು ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ 116 ರಾಸುಗಳಿಗೆ ಕಾಲು–ಬಾಯಿ ರೋಗ ನಿರೋಧಕ ಲಸಿಕೆಯನ್ನು ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಸ್.ಎನ್.ಹರೀಶ್ ನೀಡಿದರು. ವಾರ್ಡ್ನ ರಘು, ಕೃಷ್ಣ, ಮುನಿರಾಜು ಇನ್ನಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.