ಬೆಂಗಳೂರು: ‘ಮಹಾಪುರುಷರ ಜಯಂತಿಗಳು, ಅವರ ವಿಚಾರಧಾರೆಗಳು ಜಾತಿ ಕೇಂದ್ರಿತವಾಗುತ್ತಿವೆ. ಮಾರ್ಚ್ ಅಂತ್ಯದೊಳಗೆಮುಖ್ಯ ಮಂತ್ರಿಗಳು ಹಾಗೂ ವಿರೋಧಪಕ್ಷದ ನಾಯಕರ ಜತೆಗೆ ಚರ್ಚಿಸಿ, ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಒತ್ತು ನೀಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಾತ್ಮರನ್ನು ಜಾತಿ ಕೇಂದ್ರಿತ ಜಯಂತಿಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸರ್ವಜ್ಞರು ಸೇರಿದಂತೆ ಹಲವರ ಜಯಂತಿಗಳನ್ನು ಸಾಂಕೇತಿಕವಾಗಿ ಸರ್ಕಾರ ಆಚರಣೆ ಮಾಡುತ್ತಿರುವುದು ಬೇಸರವನ್ನುಂಟು ಮಾಡಿದೆ. ಮನಸ್ಸಿಗೆ ವಿರುದ್ಧವಾಗಿ ನಡೆಯಲು ನಾನು ಸಿದ್ಧನಿಲ್ಲ.ಒಂದು ವೇಳೆ ಇದಕ್ಕೆ ಜೋತು ಬೀಳುವ ಪರಿಸ್ಥಿತಿ ನಿರ್ಮಾಣವಾದರೆ ಮಂತ್ರಿ ಸ್ಥಾನದಿಂದ ಕೆಳಗಿಳಿಯಲೂ ಸಿದ್ಧನಿದ್ದೇನೆ’ ಎಂದರು.
‘ಸರ್ವಜ್ಞರ ವ್ಯಕ್ತಿತ್ವ ಭೂಮಿ– ಆಕಾಶವನ್ನು ವಿಸ್ತರಿಸಿದೆ. ಅವರ ದೊಡ್ಡ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಸಣ್ಣ ವ್ಯಕ್ತಿಗಳು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ’ ಎಂದರು.
ಉಪನ್ಯಾಸಕ ಮಲ್ಲೇಶಪ್ಪ ಗುತ್ತೇಣ್ಣನವರ್, ‘ಸರ್ವಜ್ಞರಿಗೆ ಅಪಮಾನ ಮಾಡಲು ಕೆಲವರು ಅವರ ಹೆಸರಿನಲ್ಲಿ ವಚನ ಸೃಷ್ಟಿ ಮಾಡಿದ್ದಾರೆ. ಸರ್ವಜ್ಞರ ಹುಟ್ಟೂರಿನ ಬಗ್ಗೆಯೂ ಅಪಪ್ರಚಾರಗಳು ನಡೆದಿವೆ. ಸರ್ವಜ್ಞರ ಹೆಸರಿನಲ್ಲಿ ಪ್ರಾಧಿಕಾರ ರಚಿಸಿ, ಅವರನ್ನು ಅರ್ಥೈಸಿಕೊಳ್ಳಲು ಅವಕಾಶ ಮಾಡಿಕೊಡಬೇಕು’ ಎಂದರು.
ಜನ್ಮಸ್ಥಳ ಅಭಿವೃದ್ಧಿಗೆ ಮನವಿ ಸರ್ವಜ್ಞರ ಜನ್ಮಸ್ಥಳವಾದ ಮಾಲೂರನ್ನು ಅಭಿವೃದ್ಧಿ ಪಡಿಸಬೇಕು. ಅವರ ಸಮಾಧಿಯನ್ನು ಗುರುತಿಸುವ ಕೆಲಸವಾಗಬೇಕೆಂಬ ಮನವಿಯನ್ನು ಕುಂಬಾರ ಸಂಘದ ಮುಖಂಡರು ಸಚಿವರಿಗೆ ಸಲ್ಲಿಸಿದರು.
‘ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು’ ಎಂದು ಸಿ.ಟಿ.ರವಿ ತಿಳಿಸಿದರು.