ನಾನು ಮುಖ್ಯಮಂತ್ರಿಯಾದ ತಕ್ಷಣ ಮಾಡುವ ಕೆಲಸವೆಂದರೆ, ಕಬ್ಬು ಬೆಳೆಗಾರರಿಗೆ ಕಬ್ಬಿನ ಬಾಕಿ ಹಣ ಪೂರ್ಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವುದು.
ಮಕ್ಕಳ ಶಿಕ್ಷಣ, ಆರೋಗ್ಯ, ಮದುವೆ ಮುಂಜಿ ಮುಂತಾದ ಕಾರ್ಯಗಳಿಗೆ ಹಣ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಇವರ ದುಃಖವನ್ನು ದೂರ ಮಾಡಿ ಕಬ್ಬು ಪೂರೈಸಿದ ದಿನವೇ ಹಣ ದೊರೆಯುವಂತೆ ಆದೇಶ ಮಾಡುವೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವೆ.
ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ಬೆಳೆದ ದಾಳಿಂಬೆ, ಪೇರಲ, ಮಾವು, ಚಿಕ್ಕು, ಪಪ್ಪಾಯಿ, ದ್ರಾಕ್ಷಿ ಹಣ್ಣುಗಳನ್ನು ವಿದೇಶಗಳಿಗೆ ರಪ್ತು ಮಾಡುವ ಅಂತರಾಷ್ಟ್ರೀಯ ಮಾರುಕಟ್ಟೆ ಯೋಜನೆ ಕಲ್ಪಿಸಿ ರೈತರ ಆರ್ಥಿಕ ಉನ್ನತಿಗೆ ಕ್ರಮ ಕೈಗೊಳ್ಳುವೆ.
ಕರ್ನಾಟಕದಲ್ಲಿ ನೀರಾವರಿ ಮತ್ತು ವೈಜ್ಞಾನಿಕ ಕೃಷಿಗೆ ಆದ್ಯತೆ ನೀಡಿ ಕೆಲಸ ಮಾಡುವೆ. ವೈಜ್ಞಾನಿಕ ಬೇಸಾಯದಿಂದ ಕೃಷಿ ಉತ್ಪನ್ನ ಹೆಚ್ಚುವುದು ಜನರಿಗೆ ಸಾಕಷ್ಟು ಉದ್ಯೋಗ ಅವಕಾಶ ದೊರೆಯುವುದು. ಕೃಷಿ ಸಂಶೋಧನೆಗಳು ರೈತರ ಹೊಲಗಳಿಗೆ ತಲುಪುವಂತೆ ಮಾಡಿವೆ. ಹೈನುಗಾರಿಕೆಯಿಂದ ಗ್ರಾಮೀಣ ಮಹಿಳಾ ಸಬಲೀಕರಣ ಸುಲಭವಾಗಿ ಆಗುತ್ತವೆ. ಕೃಷಿ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಸರಳ ಯೋಜನೆಗಳನ್ನು ರೂಪಿಸುವೆ.
–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.