ಬೆಂಗಳೂರು: ಪಡಿತರವಿತರಕರು ವಿತರಿಸುವ ಆಹಾರಧಾನ್ಯಕ್ಕೆ ತಲಾ ಒಂದು ಕ್ವಿಂಟಲ್ಗೆ ನೀಡುತ್ತಿರುವ ಕಮಿಷನ್ ಅನ್ನು ₹440ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಪಡಿತರ ವಿತರಕರುಮಂಗಳವಾರ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕೇಂದ್ರ ಹಣಕಾಸು ಸಚಿವಾಲಯ ರಚಿಸಿದ ವರದಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ದೇಶದಾದ್ಯಂತ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಜೊತೆಗೆ ದಿನಸಿ ವಸ್ತುಗಳು,ಎಲ್.ಪಿ.ಜಿ ಸಿಲಿಂಡರ್ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಒಂದಡೆ ಹೆಚ್ಚಿನ ಸೌಲಭ್ಯ ಸಿಗಲಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟ ಪಡಿತರ ಮಾರಾಟಗಾರರಿಗೆ ಪರಿಹಾರ ಘೋಷಿಸಿಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.
‘ರಾಜ್ಯದಾದ್ಯಂತ 20 ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವಂತಹ ಕಮಿಷನ್ ಹೆಚ್ಚಿಸಬೇಕು. ರಾಜ್ಯದ 300 ಸಗಟು ಮಳಿಗೆಗಳಲ್ಲಿ ಮೊದಲು ಬಯೋಮೆಟ್ರಿಕ್ ಅಳವಡಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಹಾರ ಸಚಿವ ಉಮೇಶ ಕತ್ತಿ ಅವರನ್ನು ಒತ್ತಾಯಿಸಿದರು.
ಆಹಾರ ಧಾನ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪೂರೈಸದೇ ಸೆಣಬಿನ ಚೀಲಗಳಲ್ಲಿ ಪೂರೈಕೆ ಮಾಡಬೇಕು. ಇದರಿಂದ ಪಡಿತರ ವಿತರಕರಿಗೆಸ್ವಲ್ಪ ಆದಾಯ ದೊರೆಯಲಿದೆ ಎಂದು ಟಿ.ಕೃಷ್ಣಪ್ಪ ಅವರು ಹೇಳಿದರು.