‘ಮಠ ಸ್ವಾಧೀನ ಇಲ್ಲ’ (ಪ್ರ.ವಾ., ಫೆ. 9) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಈ ಇಡೀ ಪ್ರಕ್ರಿಯೆ ಮಠಗಳು ಅಥವಾ ಇತರ ಭಾರತೀಯ ಮೂಲದ ಧಾರ್ಮಿಕ ಕೇಂದ್ರಗಳ ‘ಸರ್ಕಾರೀಕರಣ’ದ ಉದ್ದೇಶದ್ದಾಗಿರಲಿಲ್ಲ.
ಸರ್ಕಾರ ಹೊರಡಿಸಿದ್ದ ಅಧಿಸೂಚನೆಯು ಈ ಕುರಿತು ನೇಮಿಸಲಾಗಿದ್ದ ಆಯೋಗ ಕೈಗೊಂಡ ಆರಂಭಿಕ ಕ್ರಮವೇ ಹೊರತು, ಅದು ಸರ್ಕಾರಿ ಆದೇಶವೇ ಆಗಿರಲಿಲ್ಲ. ಹೀಗಿರುವಾಗ ಸರ್ಕಾರ ಗುರುತರ ಅಪಚಾರ ಮಾಡಹೊರಟಿದೆಯೋ ಎಂಬಷ್ಟು ಗಾಬರಿಯಲ್ಲಿ, ಜನಾಭಿಪ್ರಾಯ ಕೋರುವ ಆದೇಶವನ್ನು ರದ್ದುಪಡಿಸುವ ತರಾತುರಿ ಬೇಕಾಗಿತ್ತೇ?
‘ಮಠ-ಮಾನ್ಯಗಳನ್ನೂ, ಮಸೀದಿ-ಇಗರ್ಜಿಗಳನ್ನೂ ಸರ್ಕಾರ ವಹಿಸಿಕೊಳ್ಳುವುದು ಉಚಿತವೇ’ ಎಂಬ ಬಗ್ಗೆ ಅಭಿಪ್ರಾಯ ತಿಳಿಸಲು ಜನರಿಗೆ ಇಲ್ಲೊಂದು ಅವಕಾಶವಿತ್ತು; ಅದನ್ನು ತಪ್ಪಿಸಲಾಯಿತು. ಧರ್ಮಸಂಸ್ಥೆಗಳ ಪಾತ್ರವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯದಾಗಿದ್ದು, ಈ ಆಯಾಮಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಿಲ್ಕುಲ್ ಕೂಡದು.
ಆದರೆ ಚರ್ಚ್, ಮಸೀದಿ, ಮಠ-ಮಂದಿರಗಳು ಕಂದಾಚಾರದ ಕೇಂದ್ರಗಳೂ, ಹಣಕಾಸಿನ ಅವ್ಯವಹಾರದ ತಾಣಗಳೂ ಆದಾಗ ಅವುಗಳ ಜುಟ್ಟು ಅಲುಗಾಡಿಸಿ ಕೇಳುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಅನಿವಾರ್ಯವಾಗಿ ಇದ್ದೇ ತೀರುತ್ತದೆ.
ಮುಖ್ಯಮಂತ್ರಿ ಗಲಿಬಿಲಿ, ಇಂಥ ಧಾರ್ಮಿಕ ಕೇಂದ್ರಗಳನ್ನು ತಡೆಯುವ ನೈತಿಕ ಧೈರ್ಯ ಸರ್ಕಾರಕ್ಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆಯೇ?