ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ಪ್ರೊಬೇಷನರಿ ಅವಧಿಯಲ್ಲೇ ಜಂಟಿ ನಿರ್ದೇಶಕ ಹುದ್ದೆ!

ಕಿರಿಯ ಶ್ರೇಣಿ ಅಧಿಕಾರಿಗೆ ಹುದ್ದೆ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ: ಆರೋಪ
Last Updated 30 ಜುಲೈ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಎಸ್‌ (ಕಿರಿಯ ಶ್ರೇಣಿ) ಪ್ರೊಬೇಷನರಿ ಅಧಿಕಾರಿಯಾಗಿರುವ ವಿಶ್ವನಾಥ ಪಿ.ಹಿರೇಮಠ ಅವರನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನಾಗಿ ಗುರುವಾರ ವರ್ಗ ಮಾಡಲಾಗಿದೆ. ಪ್ರೊಬೇಷನರಿ ಅವಧಿಯಲ್ಲಿರುವ ಅಧಿಕಾರಿಗೆ ಕೆಎಎಸ್‌ ಆಯ್ಕೆ ಶ್ರೇಣಿ/ಐಎಎಸ್‌ ದರ್ಜೆಯ ಈ ಹುದ್ದೆಯನ್ನು ನೀಡಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಕೆಎಎಸ್‌ ಕಿರಿಯ ಶ್ರೇಣಿ ಪ್ರೊಬೇಷನರಿ ಅಧಿಕಾರಿಯು ಪರೀಕ್ಷಾರ್ಥ ಅವಧಿಯಲ್ಲಿ ಸಾಮಾನ್ಯವಾಗಿ ಯಾವುದಾದರೂ ಐಎಎಸ್‌ ಅಧಿಕಾರಿಯ ಅಧೀನದಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಅಂದರೆ ಉಪವಿಭಾಗಾಧಿಕಾರಿಗಿಂತ ಕಡಿಮೆ ಹಂತದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್‌, ತಹಶೀಲ್ದಾರ್‌ ಹುದ್ದೆಗಳನ್ನು ಸ್ವತಂತ್ರವಾಗಿ ನಿಭಾಯಿಸಬೇಕಾಗುತ್ತದೆ. ಆ ಬಳಿಕವಷ್ಟೇ ಸ್ವತಂತ್ರ ಕಾರ್ಯನಿರ್ವಹಣೆಯ ಉಪವಿಭಾಗಾಧಿ ಕಾರಿ ಹುದ್ದೆಯನ್ನು ಅವರಿಗೆ ಹಂಚಿಕೆ ಮಾಡಬೇಕು. ಆದರೆ,ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ–2 ಆಗಿದ್ದ ಹಿರೇಮಠ ವಿಚಾರದಲ್ಲಿ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗಿದೆ’ ಎಂದು ಕೆಲವು ಅಧಿಕಾರಿಗಳು ದೂರಿದ್ದಾರೆ.

ಹಿರೇಮಠ ಅವರಿಗೆ ಜುಲೈ 13ರಂದು ಕೆಎಎಸ್‌ ಕಿರಿಯ ಶ್ರೇಣಿ ಪ್ರೊಬೇಷನರಿ ಹುದ್ದೆಗೆ ಬಡ್ತಿ ನೀಡುವ ಸಂದರ್ಭದಲ್ಲೂ ಎಲ್ಲಾ ಚಾಲ್ತಿ ನಿಯಮ ಗಳನ್ನು ಕಡೆಗಣಿಸಲಾಗಿತ್ತು. ಬಡ್ತಿ ಪಡೆದ 11 ದಿನಗಳಲ್ಲೇ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಹಿರೇಮಠ ಅವರಿಗೆ ಬಿಬಿಎಂಪಿಯ ಸಹಾಯಕ ಆಯುಕ್ತ (ಭೂಸ್ವಾಧೀನ) ಹುದ್ದೆಯನ್ನು ಜುಲೈ 24ರಂದು ಹಂಚಿಕೆ ಮಾಡಲಾಗಿತ್ತು. ಇದಾಗಿ ವಾರದೊಳಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

‘ಜಂಟಿ ನಿರ್ದೇಶಕ ಹುದ್ದೆಯು ಕೆಎಎಸ್‌ ಆಯ್ಕೆ ಶ್ರೇಣಿಯದ್ದು/ ಐಎಎಸ್‌ ದರ್ಜೆಯದ್ದು. ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿ ಈ ಹುದ್ದೆ ಪಡೆಯಲು ಏನಿಲ್ಲವೆಂದರೂ 9 ವರ್ಷ ಕಾಯಬೇಕು. ಹುದ್ದೆಗಳು ಖಾಲಿ ಇದ್ದಾಗ ಮಾತ್ರ ಇಂತಹ ಅವಕಾಶ ಒದಗಿ
ಬರುತ್ತದೆ. ಆದರೆ, ಹಿರೇಮಠ ಅವರಿಗೆ ಹುದ್ದೆ ನೀಡುವ ವಿಚಾರದಲ್ಲಿ ಸರ್ಕಾರ ನಡೆದುಕೊಂಡಿರುವ ರೀತಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲಿದೆ. ಇದರಿಂದ ಬೇರೆ ಕೆಎಎಸ್‌ ಅಧಿಕಾರಿ ಗಳಿಗೆ ಅನ್ಯಾಯವಾಗಿದೆ. ಇದು ಸ್ವಜನಪಕ್ಷಪಾತವಲ್ಲದೇ ಮತ್ತೇನಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT