ಪೀಣ್ಯ ದಾಸರಹಳ್ಳಿ: ‘ಇತ್ತೀಚೆಗೆ ಕೆಟ್ಟ ಸಾಹಿತ್ಯದ ಹಾಡುಗಳು ಹೆಚ್ಚುತ್ತಿವೆ. ಇಂತಹ ಅಶ್ಲೀಲ ಗೀತೆಗಳನ್ನು ತಿರಸ್ಕರಿಸಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.
ಬಾಗಲಗುಂಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಲೆ, ಸಾಹಿತ್ಯ ಎನ್ನುವುದು ತಪಸ್ಸಿನಂತೆ. ದೀರ್ಘಕಾಲ ಪ್ರಯತ್ನಪಟ್ಟರೆ ಫಲ ಸಿಗುತ್ತದೆ’ ಎಂದರು.
‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ್ ಚ.ಹ. ಮಾತನಾಡಿ, ‘ಸಾಹಿತ್ಯದ ಸಂಪರ್ಕ ಜ್ಞಾನವನ್ನು ಹೆಚ್ಚಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಕಲೆ, ಸಾಹಿತ್ಯ ನಮ್ಮ ಬದುಕಿಗೆ ಪೂರಕವಾಗಿವೆ’ ಎಂದರು.
ರವೀಶ್ ಅವರ ‘ಪ್ರೀತಿಯ ನೆರಳು’ ಕಾದಂಬರಿಯನ್ನು ಸಾಹಿತಿ ದ್ವಾರನಕುಂಟೆ ಪಾತಣ್ಣ ಬಿಡುಗಡೆ ಮಾಡಿದರು. ‘ಕಡೆಗೋಲ ಚಿನ್ನರಿಲು’ ಕಥಾಸಂಕಲನವನ್ನು ಲೇಖಕ ಎಸ್. ಗುರುರಾಜ್ ಬಿಡುಗಡೆ ಮಾಡಿದರು.
ಈ. ರವೀಶ್, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ, ದಾಸರಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ. ಬಿ ಎಚ್. ಜಯದೇವ್ ಇದ್ದರು.