ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿ ಎದುರು ಸರ್ವಜ್ಞನ ಪ್ರತಿಮೆ ಸ್ಥಾಪಿಸಬೇಕು. ಆ ಮೂಲಕ ಕ್ರಾಂತಿಕವಿ ಎಂದೇ ಪ್ರಸಿದ್ಧರಾಗಿದ್ದ ಅವರ ನೆನಪು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುವಂತೆ ಮಾಡಬೇಕು’ ಎಂದು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಚಿಂತನ’ ರಂಗ ಕಲಾವಿದರ ಬಳಗ ಹಮ್ಮಿಕೊಂಡಿದ್ದ ಮಹಾಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡದ ಮೊದಲ ಬಂಡಾಯ ಕವಿ ಸರ್ವಜ್ಞ. ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದ ಅವರು ನಿಜ ಅರ್ಥದ ನಾಡೋಜ. ಅಂತಹ ಮಹಾನ್ ಕವಿಯನ್ನೇ ನಾವು ಮೂಲೆಗುಂಪು ಮಾಡುತ್ತಿದ್ದೇವೆ’ ಎಂದು ವಿಷಾದವ್ಯಕ್ತಪಡಿಸಿದರು.
‘ಸರ್ವಜ್ಞನವರು ಜಾತಿ–ಕುಲ–ಧರ್ಮಗಳ ಸಂಕೋಲೆಯಿಂದ ಸಾಹಿತ್ಯ ಲೋಕವನ್ನು ಬೇರ್ಪಡಿಸಿದವರು. ಅಂತಹ ದಾರ್ಶನಿಕ ಕವಿಯ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಾಗಬೇಕು’ ಎಂದರು.
ಕವಯತ್ರಿ ಎಂ.ಪ್ರಿಯದರ್ಶಿನಿ, ರಂಗ ನಿರ್ದೇಶಕ ಜೆ.ಎಚ್.ಕುಮಾರ್, ರಾ.ನರಸಿಂಹಮೂರ್ತಿ, ಅಕ್ಷಯ ಕೃಷ್ಣಮೂರ್ತಿ ಇದ್ದರು.