‘ಕೊಡಗು ಮೂಲಕ ಮೈಸೂರು – ತಲಶ್ಶೇರಿ ರೈಲು ಮಾರ್ಗ ನಿರ್ಮಿಸಲು ಕೆಲವು ಸ್ಥಾಪಿತ ಹಿತಾಸಕ್ತಿಗಳ ಪರ ವೇಣುಗೋಪಾಲ್ ಲಾಬಿ ನಡೆಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೇ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನ ನಡೆದಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಕಾವೇರಿ ಕಣಿವೆ, ಕೊಡಗು, ಮೈಸೂರು ಜಿಲ್ಲೆಗಳ ಭಾಗದಲ್ಲಿ ವ್ಯಾಪಕ ಅರಣ್ಯ ನಾಶ ಉಂಟಾಗಲಿದೆ. ಇದರಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶೇ 70ರಷ್ಟು ನೀರು ಪೂರೈಸುವ ಕಾವೇರಿ ಮೂಲಕ್ಕೆ ಧಕ್ಕೆ ಒದಗಲಿದೆ. ಈ ಯೋಜನೆಯನ್ನು ಜಾರಿಗೆ ತಂದು ಸ್ಥಾಪಿತ ಹಿತಾಸಕ್ತಿಗಳಿಗೆ ಲಾಭ ಮಾಡಿಕೊಡಲು ಅವರು ಮುಂದಾಗಿದ್ದಾರೆ. ಕೂಡಲೇ ಅವರನ್ನು ಉಸ್ತುವಾರಿ ಹುದ್ದೆಯಿಂದ ತೆರವು ಮಾಡಬೇಕು’ ಎಂದು ಸಂಸ್ಥೆಯ ಅಧ್ಯಕ್ಷ, ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.