ಬೆಸ್ಕಾಂ ಕಚೇರಿಯಲ್ಲಿ ಕಳ್ಳತನ: ಗುತ್ತಿಗೆ ನೌಕರನಿಂದಲೇ ಕೃತ್ಯ

ಬೆಂಗಳೂರು: ಕಚೇರಿಯ ನಗದು ಕೌಂಟರ್ನಲ್ಲಿಟ್ಟಿದ್ದ ₹1.40 ಲಕ್ಷ ಹಣವನ್ನು ಕದ್ದಿದ್ದ ಬೆಸ್ಕಾಂ ನೌಕರ ಹೇಮಂತ್ ಎಂಬಾತನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ, ಕದ್ದ ಹಣವನ್ನು ಜಪ್ತಿ ಮಾಡಿದ್ದಾರೆ.
‘ಮಂಡ್ಯ ಜಿಲ್ಲೆಯವನಾದ ಆರೋಪಿಯು ಕೆಂಗೇರಿ ಉಪನಗರದ 5ನೇ ಮುಖ್ಯರಸ್ತೆಯ 5ನೇ ತಿರುವಿನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅಕ್ಟೋಬರ್ 28 ರಂದು ಕಚೇರಿಯ ನಗದು ಕೌಂಟರ್ನಲ್ಲಿ ಇಟ್ಟಿದ್ದ ಹಣ ಕಳುವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನೌಕರರನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಹೇಮಂತ್ ಮೇಲೆ ಅನುಮಾನ ಮೂಡಿದ್ದರಿಂದ ಆತನನ್ನು ಪ್ರತ್ಯೇಕವಾಗಿ ವಿಚಾರಿಸಲಾಗಿತ್ತು. ಈ ವೇಳೆ ಹಣ ಕದ್ದಿದ್ದಾಗಿ ಒಪ್ಪಿಕೊಂಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
‘ಕಚೇರಿಯಲ್ಲಿ ಎಂದಿನಂತೆ ಬೆಳಿಗ್ಗೆ ಪೂಜೆ ನಡೆದಿತ್ತು. ಕವಿತಾ ಎಂಬುವರಿಗೆ ಆರೋಪಿ ಪ್ರಸಾದ ಕೊಡಲು ಹೋಗಿದ್ದ. ಅವರು ಅದನ್ನು ನಗದು ಹಣ ಇರುವ ಕೊಠಡಿಯಲ್ಲಿ ಇಡುವಂತೆ ಕೀಲಿ ಕೊಟ್ಟು ಕಳುಹಿಸಿದ್ದರು. ಬೀಗ ತೆಗೆದು ಪ್ರಸಾದ ಇಟ್ಟು ಬಂದಿದ್ದ ಆರೋಪಿ ಬಳಿಕ ಕೀಲಿಯನ್ನು ಕವಿತಾಗೆ ಹಿಂತಿರುಗಿಸಿದ್ದ. ಅದೇ ದಿನ ಮಂಜುನಾಥ್ ಎಂಬುವರು ಹಣ ಸಂಗ್ರಹಿಸಲು ಬಂದಿದ್ದರು. ಹಣ ಇಟ್ಟಿದ್ದ ಕೊಠಡಿಯ ಬಾಗಿಲು ತೆರೆದಿರುವ ವಿಚಾರವನ್ನು ಕವಿತಾ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಬಾಕ್ಸ್ನಲ್ಲಿ ಇಟ್ಟಿದ್ದ ಹಣ ಇರಲಿಲ್ಲ. ಈ ಸಂಬಂಧ ಅವರು ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.