ಈ ನಡುವೆ, ಕೆಂಗೇರಿ ಉತ್ತರಹಳ್ಳಿ ವ್ಯಾಪ್ತಿಯ ಬಡಾವಣೆಗಳು ತೀವ್ರಗತಿಯಲ್ಲಿ ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಜನಸಂಖ್ಯೆಯೂ ಹೆಚ್ಚಿತ್ತು. ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ, ರಾಜರಾಜೇಶ್ವರಿನಗರ ಸೇರಿದಂತೆ ಇನ್ನಿತರೆ ಕಡೆಗೆ ತೆರಳುವ ಸಾರ್ವಜನಿಕರಿಗೆ ಈ ರಸ್ತೆ ಅತ್ಯಂತ ಅನುಕೂಲಕರವಾದ ಬದಲಿ ರಸ್ತೆಯಾಗಿ ಬದಲಾಗಿತ್ತು. ಇದರಿಂದ ವಾಹನ ದಟ್ಟಣೆ ಹೆಚ್ಚಿ ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಅತಿಯಾದ ವಾಹನ ಸಂದಣಿಯಿಂದ ರಸ್ತೆಯು ಹದಗೆಟ್ಟು ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿತ್ತು. ಶ್ರೀನಿವಾಸಪುರ ಬಳಿಯ ಆದಿತ್ಯ ಬೇಕರಿಯಿಂದ ಕೆಂಗೇರಿಯ ಕೃಷ್ಣಪ್ರಿಯಾ ಕಲ್ಯಾಣ ಮಂಟಪದವರೆಗೆ ನಿರ್ಮಾಣಗೊಳ್ಳಲಿರುವ ₹51ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿಯಿಂದ ಈ ಎಲ್ಲ ಸಮಸ್ಯೆಗಳಿಗೆ ತೆರೆಬೀಳಲಿದೆ.