ಬೆಂಗಳೂರು:ಮೂತ್ರಪಿಂಡ ವೈಫಲ್ಯದಿಂದ ಸಮಸ್ಯೆ ಎದುರಿಸುತ್ತಿದ್ದ ಎಚ್ಐವಿ ಸೋಂಕಿತ ಉದ್ಯಮಿಗೆ ಮಣಿಪಾಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿದ್ದಾರೆ.
ಮೂತ್ರಪಿಂಡ ಕಸಿ ಮಾಡುವ ಮುನ್ನಎಚ್ಐವಿ ಸೋಂಕನ್ನು ನಿಯಂತ್ರಣಕ್ಕೆ ತರಲು ವೈದ್ಯರು ಆಂಟಿರೆಟ್ರೋವೈರಲ್ ಥೆರಪಿನೀಡಿದರು.ರೋಗಿಯ ಸಹೋದರಿಯೇ ಅಂಗಾಂಗ ದಾನ ಮಾಡಿದ್ದು, ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಮತ್ತು ನರರೋಗಶಾಸ್ತ್ರ ಸಲಹಾತಜ್ಞ ಡಾ.ರವಿ ಜಂಗಮನಿ ಕಸಿ ಮಾಡಿದ್ದಾರೆ.
‘ಸಾಮಾನ್ಯವಾಗಿ ಎಚ್ಐವಿ ಸೋಂಕಿತ ರೋಗಿಗಳಿಗೆ ಅಂಗಾಂಗ ಕಸಿ ಮಾಡುವುದಿಲ್ಲ. ರೋಗಿ ಬದುಕುಳಿಯುವ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ. ಕಸಿ ಮಾಡುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿತ್ತು’ ಎಂದು ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದರು.
‘ಎಚ್ಐವಿ ಸೋಂಕು ಇರುವವರಿಗೆ ಮೂತ್ರಪಿಂಡ ಕಸಿ ಸಾಧ್ಯವಾಗದು ಎಂದು ಇತ್ತೀಚಿನವರೆಗೆ ಪರಿಗಣಿಸಲಾಗಿತ್ತು. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೀಡುವ ಔಷಧಗಳು ಕೂಡ ಅಪಾಯಕ್ಕೆ ಕಾರಣವಾಗುತ್ತವೆ.ಮೂತ್ರಪಿಂಡ ಕಸಿ ಎಚ್ಐವಿ ಸೋಂಕಿತ ರೋಗಿಗಳಿಗೆ ಅತ್ಯುತ್ತಮ ಬದಲಿ ಆಯ್ಕೆಯಾಗಿದೆ’ ಎಂದು ಎಂದುಡಾ.ರವಿ ಜಂಗಮನಿ ತಿಳಿಸಿದರು.