ಅಫಜಲಪುರ: ತಾಲ್ಲೂಕಿನಲ್ಲಿ ಮೂರು ತಿಂಗಳಿಂದ ಭೀಮಾ, ಅಮರ್ಜಾ ಸೇರಿದಂತೆ ವಿವಿಧ ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದು, ಕೆಲವು ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸೊನ್ನ ಹತ್ತಿರ ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಭೀಮಾ ಬ್ಯಾರೇಜ್ನಲ್ಲಿ ನೀರು ಕಡಿಮೆಯಾಗುತ್ತಿದ್ದು, ಇನ್ನೊಂದು ಕಡೆ ಬ್ಯಾರೇಜ್ನ ಕೆಳಭಾಗದ ನದಿ ಸಂಪೂರ್ಣ ಬತ್ತಿ ಹೋಗಿದೆ.
ತಾಲ್ಲೂಕಿನಲ್ಲಿ ಹರಿಯುವ ಅಮರ್ಜಾ ನದಿಯೂ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ನದಿ ನೀರು ಅವಲಂಬಿಸಿ ತೋಟದ ಬೆಳೆ ಬೆಳೆಯುತ್ತಿರುವ ರೈತರು ಪರದಾಡುವಂತಾಗಿದೆ. ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಸುಮಾರು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಚಿಂಚೋಳಿ ಗ್ರಾಮದಲ್ಲಿ ಕೊರೆದಿರುವ ಕೊಳವೆ ಬಾವಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ತಾಲ್ಲೂಕು ಆಡಳಿತ ಸ್ಪಂದನೆ ಮಾಡಬೇಕೆಂದು ಗ್ರಾಮಸ್ಥರು ಹೇಳುತ್ತಾರೆ.
ತಾಲ್ಲೂಕಿನ ಮಣೂರ ಗ್ರಾಮದ ಹತ್ತಿರ ಇಂಡಿ ತಾಲ್ಲೂಕಿನ ಭೂಯ್ಯಾರ ಬ್ಯಾರೇಜ್ ಬತ್ತಿ ಹೋಗಿದ್ದು, ಮಣೂರ ಭಾಗದ ನದಿ ದಂಡೆಯ ಮತ್ತು ತೋಟದ ವಸತಿ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಅಕ್ರಮ ಮರಳು ದಂಧೆಯೂ ಜೋರಾಗಿ ನಡೆದಿದೆ. ಈ ಭಾಗದಲ್ಲಿ ಭೀಮಾನದಿ ಪೂರ್ತಿ ಬರಿದಾಗುತ್ತಿದೆ. ತಾಲ್ಲೂಕು ಆಡಳಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಮಣೂರ ಗ್ರಾಮದ ಮುಖಂಡ ಶ್ರೀಕಾಂತ ನಿವರಗಿ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಭೀಮಾ ಬ್ಯಾರೇಜ್ನಲ್ಲಿ ಸದ್ಯಕ್ಕೆ 0.87 ಟಿಎಂಸಿ ನೀರು ಇದೆ. ಕುಡಿಯಲು ಮಾತ್ರ ನೀರು ಉಪಯೋಗಿಸಲಾಗುತ್ತಿದೆ. ವಾರಕ್ಕೊಮ್ಮೆ ಗೇಟ್ ತೆರೆದು ಅಫಜಲಪುರ ಪಟ್ಟಣಕ್ಕೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತದೆ. ಬೇಗ ಮಳೆಗಾಲ ಆರಂಭವಾದರೆ ಅನುಕೂಲವಾಗುತ್ತದೆ. ಮಣೂರ ಗ್ರಾಮದ ಹತ್ತಿರ ಭೀಮಾನದಿ ಬತ್ತಿ ಹೋಗಿದೆ. ನದಿಯ ಮೇಲಿರುವ ಭೂಯ್ಯಾರ ಬ್ಯಾರೇಜ್ ಬತ್ತಿ ಹೋಗಿದ್ದರಿಂದ ಬ್ಯಾರೇಜ್ ಕೆಳಗಿನ ಭಾಗದ ಜನರಿಗೆ ತೊಂದರೆ ಆಗುತ್ತಿದೆ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜನಿಯರ್ ಬಿ.ಎಸ್.ಐನಾಪೂರ ಸೋಮವಾರ ಮಾಹಿತಿ ನೀಡಿದರು.