ಬೆಂಗಳೂರು: ಮನೆಯೊಳಗೆ ನುಗ್ಗಿ ಮಹಿಳೆಯರ ಚಿನ್ನದ ಸರ ಕದ್ದೊಯ್ದಿದ್ದ ಆರೋಪದಡಿ ಮಂಜುನಾಥ್ ಅಲಿಯಾಸ್ ಕೋಳಿ ಮಂಜನನ್ನು (31) ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಮಂಜ 2017ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದ. ಈತನಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ತನ್ನದೇ ತಂಡ ಕಟ್ಟಿಕೊಂಡಿದ್ದ ಆರೋಪಿ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದ. ಈತ ಕದ್ದು ತಂದ ಆಭರಣಗಳನ್ನು ತಾಯಿ–ತಂಗಿ ವಿಲೇವಾರಿ ಮಾಡುತ್ತಿದ್ದರು. ಇವರೆಲ್ಲರನ್ನೂ ಈ ಹಿಂದೆ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದರು’ ಎಂದೂ ತಿಳಿಸಿದರು.