ಬೆಂಗಳೂರು: ಮಳೆಯಿಂದ ತತ್ತರಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಲು ಕೆಪಿಸಿಸಿ ಮತ್ತೆ 5 ತಂಡಗಳನ್ನು ರಚಿಸಿದೆ.
ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗೆ ಆರ್.ವಿ.ದೇಶಪಾಂಡೆ, ಮೈಸೂರು, ಕೊಡಗು ಭಾಗಕ್ಕೆ ಎಚ್.ಸಿ.ಮಹದೇವಪ್ಪ, ಚಿಕ್ಕಮಗಳೂರು, ಹಾಸನಕ್ಕೆ ಬಿ.ಎಲ್.ಶಂಕರ್, ದಕ್ಷಿಣ ಕನ್ನಡ, ಉಡುಪಿಗೆ ಬಿ.ರಮಾನಾಥ ರೈ, ಬಳ್ಳಾರಿ, ಕೊಪ್ಪಳ ಜಿಲ್ಲೆಗೆ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ತಂಡ ರಚನೆಯಾಗಿದೆ.
ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಅಧ್ಯಯನ ನಡೆಸಲು ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ ನೇತೃತ್ವದಲ್ಲಿ ರಚಿಸಿರುವ ತಂಡಗಳು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿವೆ.
ಹೊಸದಾಗಿ ನೇಮಕಗೊಂಡಿರುವ ತಂಡಗಳ ಮುಖಂಡರು ತಕ್ಷಣ ತಮಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಮಳೆ, ನೆರೆಯಿಂದ ಆಗಿರುವ ಹಾನಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಾಳೆ ಸಭೆ: ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪಕ್ಷ ಯಾವ ರೀತಿಯಲ್ಲಿ ಸ್ಪಂದಿಸಬೇಕು ಎಂಬ ಬಗ್ಗೆ ಚರ್ಚಿಸಲು ಬುಧವಾರ ಪ್ರಮುಖರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿ ‘ಪರಿಹಾರ ಸಮಿತಿ’ ರಚಿಸಲಾಗುವುದು. ಆ ಮೂಲಕ ಜನರ ನೆರವಿಗೆ ಪಕ್ಷ ಬರಲಿದೆ ಎಂದು ಹೇಳಿದ್ದಾರೆ.