ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದನಪಲ್ಲಿ ರೌಡಿ, ಚಾಲಕನ ಮೇಲೆ ಗುಂಡಿನ ದಾಳಿ

* ಆಂಧ್ರಪ್ರದೇಶದಿಂದ ಬಂದಿದ್ದ ತಂಡದಿಂದ ಕೃತ್ಯ * ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ
Last Updated 8 ಡಿಸೆಂಬರ್ 2022, 18:57 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶಿವಶಂಕರ್ ರೆಡ್ಡಿ (29) ಹಾಗೂ ಕಾರು ಚಾಲಕ ಅಶೋಕ ರೆಡ್ಡಿ (33) ಮೇಲೆ ಗುಂಡಿನ ದಾಳಿ ನಡೆದಿದ್ದು, ಆಂಧ್ರಪ್ರದೇಶದಿಂದ ಬಂದಿದ್ದ ತಂಡ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

‘ಆಂಧ್ರಪ್ರದೇಶದ ಶಿವಶಂಕರ್, ಕೆ.ಆರ್. ಪುರದ ಕೆ. ಸೊನ್ನೇನಹಳ್ಳಿ ಹ್ಯಾಪಿ ಗಾರ್ಡನ್ ಬಡಾವಣೆ ಬಳಿ ಅಪಾರ್ಟ್‌ಮೆಂಟ್ ಸಮುಚ್ಚಯವೊಂದನ್ನು ಕಟ್ಟಿಸುತ್ತಿದ್ದ. ಇದರ ಕಾಮಗಾರಿ ವೀಕ್ಷಣೆಗೆಂದು ಚಾಲಕ ಅಶೋಕ ಜೊತೆ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

‘ಎರಡು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು, ರಸ್ತೆಬದಿ ನಿಂತಿದ್ದ ಶಿವಶಂಕರ್ ಹಾಗೂ ಅಶೋಕ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಶಿವಶಂಕರ್ ಹಾಗೂ ಅಶೋಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಕೊಲೆ ಆರೋಪಿ: ‘ಅಪರಾಧ ಹಿನ್ನೆಲೆಯುಳ್ಳ ಶಿವಶಂಕರ್ ರೆಡ್ಡಿ, ಆಂಧ್ರಪ್ರದೇಶದಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣದ ಆರೋಪಿ. ಜೊತೆಗೆ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಹೆಸರು ಮದನಪಲ್ಲಿ ಠಾಣೆಯ ರೌಡಿ ಪಟ್ಟಿಯಲ್ಲಿತ್ತು’ ಎಂದು ಪೊಲೀಸರು ಹೇಳಿದರು.

‘ಶಿವಶಂಕರ್ ಹಾಗೂ ಅಶೋಕ, ಬೆಂಗಳೂರಿನಲ್ಲೂ ಆಸ್ತಿ ಮಾಡಿದ್ದಾರೆ. ಪಾಲುದಾರಿಕೆಯಲ್ಲಿ ಹ್ಯಾಪಿ ಗಾರ್ಡನ್ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸುತ್ತಿದ್ದರೆಂದು ಗೊತ್ತಾಗಿದೆ. ಇಬ್ಬರೂ ಸೇರಿ ಸ್ಥಳಕ್ಕೆ ಬಂದಿದ್ದಾಗ ಗುಂಡಿನ ದಾಳಿ ನಡೆದಿದೆ’ ಎಂದು ತಿಳಿಸಿದರು.

‘ಆಂಧ್ರಪ್ರದೇಶದಿಂದ ಬಂದಿದ್ದ ಎದುರಾಳಿ ತಂಡದವರೇ, ರೌಡಿ ಶಿವಶಂಕರ್‌ನನ್ನು ಹತ್ಯೆ ಮಾಡಲು ಯತ್ನಿಸಿರುವ ಮಾಹಿತಿ ಇದೆ. ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT