ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಇಂದು

ಹುಮನಾಬಾದ್, ಬಸವಕಲ್ಯಾಣ, ಔರಾದ್ ಕ್ಯಾಂಟೀನ್ ಇನ್ನೂ ವಿಳಂಬ
Last Updated 13 ಮಾರ್ಚ್ 2018, 6:15 IST
ಅಕ್ಷರ ಗಾತ್ರ

ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್’ ಕೊನೆಗೂ ಬೀದರ್‌ನ ಮೂರು ಕಡೆಗಳಲ್ಲಿ ಮಂಗಳವಾರ ಉದ್ಘಾಟನೆಯಾಗಲಿವೆ.

ಬೀದರ್‌ ನಗರಸಭೆ ಆವರಣ, ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಅನುಕೂಲ ಮಾಡಿಕೊಡಲು ಜಿಲ್ಲಾ ಆಸ್ಪತ್ರೆ ಆವರಣ ಹಾಗೂ ರೈತರು, ಹಮಾಲಿಗಳು ಹಾಗೂ ಲಾರಿ ಚಾಲಕರನ್ನು ಗಮನದಲ್ಲಿ ಇಟ್ಟುಕೊಂಡು ಎಪಿಎಂಸಿ ಆವರಣದಲ್ಲಿ ಕ್ಯಾಂಟೀನ್‌ ನಿರ್ಮಿಸಲಾಗಿದೆ.

‘ಔರಾದ್‌ನ ಸಣ್ಣ ನೀರಾವರಿ ಇಲಾಖೆಯ ಜಾಗ, ಹುಮನಾಬಾದ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣ ಹಾಗೂ ಬಸವಕಲ್ಯಾಣದ ನಾರಾಯಣಪುರ ಕ್ರಾಸ್‌ನಲ್ಲಿರುವ ನಗರಸಭೆಯ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಔರಾದ್‌ ಹಾಗೂ ಭಾಲ್ಕಿಯಲ್ಲಿ ಮುಂದಿನ ವಾರ, ಹುಮನಾಬಾದ್ ಹಾಗೂ ಬಸವಕಲ್ಯಾಣದಲ್ಲಿ ಎರಡು ವಾರಗಳ ನಂತರ ಕ್ಯಾಂಟೀನ್‌ ಆರಂಭವಾಗಲಿವೆ’ ಎಂದು ಬೀದರ್‌ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್‌) ಒಂದೇ ಮಾದರಿಯಲ್ಲಿ ಕ್ಯಾಂಟಿನ್‌ಗಳನ್ನು ನಿರ್ಮಿಸಿದೆ. ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ ₹ 5ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ₹ 10ಗೆ ದೊರೆಯಲಿದೆ.

‘ಬೆಳಿಗ್ಗೆ 7.30ರಿಂದ 9.30ರ ವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30, ಹಾಗೂ ಸಂಜೆ 7.30ರಿಂದ ರಾತ್ರಿ 8.30ರ ವರೆಗೆ ಊಟ ದೊರೆಯಲಿದೆ. ಒಂದು ಬಾರಿಗೆ 500 ಜನ ಆಹಾರ ಸೇವಿಸಬಹುದು. ಒಂದು ಕ್ಯಾಂಟೀನ್‌ನಲ್ಲಿ ಒಂದು ದಿನ 1,500 ಜನ ಆಹಾರ ಸೇವಿಸಬಹುದು. ನಗರದ ಮೂರು ಕ್ಯಾಂಟೀನ್‌ಗಳಲ್ಲಿ 4,500 ಜನರಿಗೆ ಉಪಾಹಾರ ಹಾಗೂ ಊಟ ದೊರೆಯಲಿದೆ’ ಎಂದು ನಗರಸಭೆಯ ಆಯುಕ್ತ ಮನೋಹರ ತಿಳಿಸಿದರು.

ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ತೆವಳುತ್ತ ಸಾಗಿತ್ತು. ಕಾಮಗಾರಿ ಪೂರ್ಣಗೊಳ್ಳದ ಕಾರಣ ಮೂರು ಬಾರಿ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕಾಗಿಯೇ ಒಮ್ಮೆ ಸಭೆಯನ್ನೂ ನಡೆಸಿದ್ದರು. ಆದರೂ ಮೂರು ಕ್ಯಾಂಟೀನ್‌ ಮಾತ್ರ ಸಿದ್ಧವಾಗಿವೆ. ನಾಲ್ಕು ತಾಲ್ಲೂಕುಗಳ ಜನತೆ ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ ಎಂದು ಅವರು ಹೇಳಿದರು.

ಸಚಿವರಿಂದ ಚಾಲನೆ
ಬೀದರ್:
ಜಿಲ್ಲಾಡಳಿತ ಹಾಗೂ ನಗರಸಭೆಯ ವತಿಯಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮ ಮಾ.13ರಂದು ಬೆಳಿಗ್ಗೆ 10 ಗಂಟೆಗೆ ನಗರಸಭೆ ಆವರಣದಲ್ಲಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ರಾಜಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ಶಾಸಕರಾದ ಮಲ್ಲಿಕಾರ್ಜುನ ಖೂಬಾ. ಪ್ರಭು ಚವ್ಹಾಣ, ಅಶೋಕ ಖೇಣಿ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್‌ ಮಲ್ಕಾಪೂರೆ, ವಿಜಯ ಸಿಂಗ್, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ್, ನಗರ ಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ. ಅತೀಕ್ ಅಹ್ಮದ್, ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಬೀದರ್‌ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ನಗರಸಭೆ ಆಯುಕ್ತ ಮನೋಹರ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT