ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಹೆಗ್ಗುಂದ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ.
‘ಮೂರು ಚಿರತೆಗಳುಕೆಲವು ದಿನಗಳಿಂದ ಬೆಟ್ಟ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಓಡಾಡುತ್ತಿವೆ’ ಎಂದು ಪ್ರತ್ಯಕ್ಷಿದರ್ಶಿಗಳು ಹೇಳಿದ್ದಾರೆ.
ಶನಿವಾರ ರಾತ್ರಿ ಬುಗಡಿಹಳ್ಳಿ ಗ್ರಾಮದ ರಂಗಸ್ವಾಮಿ ಎಂಬುವವರ ಮನೆಯ ಬಳಿ ಕಾಕಡ ಗಿಡದಲ್ಲಿ ಅವಿತುಕೊಂಡು ಸಾಕು ನಾಯಿಯನ್ನು ಹೊತ್ತೊಯ್ಯಲು ಹೊಂಚು ಹಾಕುತ್ತಿದ್ದ ಚಿರತೆಯನ್ನು ಕಂಡು ಗ್ರಾಮಸ್ಥರು ಓಡಿಸಿದ್ದಾರೆ. ಭಾನುವಾರ ಸಂಜೆ ಬೆಟ್ಟದ ಬುಡದಲ್ಲಿರುವ ವೀರಭದ್ರಸ್ವಾಮಿ ದೇವಾಲಯದ ಮೆಟ್ಟಿಲುಗಳ ಕಾಂಕ್ರೀಟಿಗೆ ನೀರು ಹಾಕಲು ಹೋಗಿದ್ದ ವಿಜಯ್ ಕುಮಾರ್ ಹಾಗೂ ಕೆಲವರು ಮೂರು ಚಿರತೆಗಳನ್ನು ಕಂಡಿದ್ದಾರೆ.
‘ಈ ಭಾಗದಲ್ಲಿ ರೈತರೇ ಹೆಚ್ಚಾಗಿದ್ದು, ದನಕರು ಕುರಿ ಮೇಕೆ, ಕೋಳಿಗಳನ್ನು ಸಾಕಿಕೊಂಡಿದ್ದು, ಚಿರೆತೆಗಳು ಎಲ್ಲಿ ದಾಳಿ ಮಾಡಿ ಹೊತ್ತೊಯ್ಯುತ್ತವೋ ಎಂಬ ಆತಂಕ ಕಾಡುತ್ತಿದೆ’ ಎಂದು ವಿಜಯ್ಕುಮಾರ್ ಹೇಳಿದರು.
‘ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುವುದು. ಬೋನು ಇಟ್ಟು ಚಿರತೆಗಳನ್ನು ಸೆರೆ ಹಿಡಿಯಲಾಗುವುದು’ ಅರಣ್ಯ ರಕ್ಷಕ ಶ್ರೀನಾಥ್ ಹೇಳಿದರು.