ಗ್ರಂಥಾಲಯವೆಂದರೆ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವುದಕ್ಕೆ, ಎರವಲು ಪಡೆಯುವುದಕ್ಕೆ ಸೀಮಿತ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಕುಮಾರಸ್ವಾಮಿ ಬಡಾವಣೆಯ ನಗರ ಕೇಂದ್ರ ಗ್ರಂಥಾಲಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಜನರಲ್ಲಿ ಓದುವ ಹವ್ಯಾಸ ರೂಢಿಸಲು ಗ್ರಂಥಾಲಯ ಇಲಾಖೆ ಜುಲೈ 19ರಿಂದ ಆಗಸ್ಟ್ 19ರ ವರೆಗೆ ‘ಓದುವ ತಿಂಗಳು’ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಗ್ರಂಥಾಲಯಗಳಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವ ಈ ಗ್ರಂಥಾಲಯ, ಮಕ್ಕಳಿಗಾಗಿ ಈಚೆಗಷ್ಟೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿತ್ತು. ಬಡಾವಣೆಯ ಹಲವು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಂಸಾ ಪತ್ರ, ಪದಕಗಳನ್ನು ಪಡೆದು ಖುಷಿಪಟ್ಟರು.
‘ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಬೇಕು. ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳೆಯುತ್ತದೆ. ಅದೇ ರೀತಿ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಓದುವುದರಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ. ಈ ಆಶಯದಿಂದ ಮಕ್ಕಳಿಗಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು’ ಎನ್ನುತ್ತಾರೆ ಗ್ರಂಥಾಲಯದ ಲೈಬ್ರರಿಯನ್ ಆನಂದ್.
ಗ್ರಂಥಾಲಯದ ಖಾಯಂ ಓದುಗರಾದ ನಿವೃತ್ತ ಎಂಜಿನಿಯರ್ ವೈ. ಶೇಷಾದ್ರಿ ಮತ್ತು ನಿವೃತ್ತ ವಕೀಲ ಬಾಳಿಗ ಅವರು ಮಕ್ಕಳಿಗೆ ಬಹುಮಾನ ವಿತರಿಸಿದರು. ಗ್ರಂಥಾಲಯದ ಖಾಯಂ ಓದುಗರನ್ನೇ ವಿಶೇಷ ಅತಿಥಿಗಳಾಗಿ ಸತ್ಕರಿಸಿದ್ದು ನೆರೆದಿದ್ದ ಓದುಗರ ಸಂತಸ ಹೆಚ್ಚಿಸಿತು.