ಬೆಂಗಳೂರು: ಜೀತ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯವನ್ನು ಇಂದಿಗೂ ದಲಿತರು ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಆಯೋಜಿಸಿದ್ದ ದಲಿತ ನಾಯಕ ಎಂ.ಜಯಣ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವ ಇದ್ದರೂ ಸತ್ತಂತೆ ಬದುಕ ಬೇಕಾದ ಸ್ಥಿತಿ ದಲಿತರನ್ನು ಕಾಡುತ್ತಿದೆ. ಅಂಬೇಡ್ಕರ್ ಅವರ ಆಶಯದಂತೆ ಬಡ ವರ್ಗದವರಿಗೆ ಹಕ್ಕು ಕೊಡಿಸಲು ಹೋರಾಟ ನಡೆಸುವವರು ಪೂರ್ಣಾ ವಧಿ ಬದುಕುತ್ತಿಲ್ಲ. ಶೋಷಿತರು ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದ ಡಾ.ಅಂಬೇಡ್ಕರ್ ಕೂಡ ಹೆಚ್ಚು ವರ್ಷ ಜೀವಿಸಲಿಲ್ಲ. ಇನ್ನಷ್ಟು ಕಾಲ ಬದುಕಿದ್ದರೆ ದಲಿತರ, ಶೋಷಿತರ ಇಂದಿನ ಜೀವನ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.
‘ರೈತ, ದಲಿತ ಹಾಗೂ ಕೂಲಿ ಕಾರ್ಮಿಕರ ನಾಯಕರಾಗಿದ್ದ ಜಯಣ್ಣ ಅವರು ಸರಳ ಸಜ್ಜನಿಕೆಯ ವಕ್ತಿ. ಜೀವನದುದ್ದಕ್ಕೂ ಹೋರಾಟ ಮಾಡಿದ ಅವರನ್ನು ಸ್ಮರಿಸಲು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಎರಡು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಿಸಲಾಗುವುದು’ ಎಂದರು.
ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಟ್ರಸ್ಟಿ ರುದ್ರಪ್ಪ ಹನಗವಾಡಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಮೋಹನ್ರಾಜ್, ಕಲಾವಿದ ಸಿ. ಚಂದ್ರಶೇಖರ್, ವಿ. ನಾಗರಾಜ್, ಗುರುಪ್ರಸಾದ್ ಕೆರಗೋಡು ಇದ್ದರು.