ಮಂಗಳೂರು: ಇಲ್ಲಿನ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಭಾನುವಾರ ರಾತ್ರಿ ತಂದೆ ಮತ್ತು ತಮ್ಮ ಸೇರಿಕೊಂಡು ಹಿರಿಯ ಮಗನನ್ನು ಕೊಲೆ ಮಾಡಿದ್ದಾರೆ.
ನವೀನ್ (28) ಕೊಲೆಯಾದ ಯುವಕ. ಆತನ ತಂದೆ ಮಂಜುನಾಥ ಮತ್ತು ತಮ್ಮ ರಾಘವೇಂದ್ರ ಕೊಲೆ ಮಾಡಿದವರು.
2017ರ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ವೇಳೆ ಮೂವರ ನಡುವೆ ಜಗಳವಾಗಿತ್ತು. ಆ ದಿನ ನವೀನ್ ತಂದೆ ಮೇಲೆ ಹಲ್ಲೆ ನಡೆಸಿದ್ದ. ಸೋಮವಾರ ರಾತ್ರಿ ಊಟಕ್ಕೆ ಕುಳಿತಿದ್ದಾಗ ಮತ್ತೆ ಗಲಾಟೆ ನಡೆದಿದೆ. ಆಗ ತಂದೆ ಮತ್ತು ತಮ್ಮ ಸೇರಿಕೊಂಡು ಚೂರಿಯಿಂದ ಹೊಟ್ಟೆ ಮತ್ತು ತೊಡೆಗೆ ಇರಿದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಜುನಾಥ ಮತ್ತು ರಾಘವೇಂದ್ರ ಪರಾರಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್ ಪಿ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಮಂಜುನಾಥ ಮತ್ತು ರಾಘವೇಂದ್ರ ಬೆಳ್ತಂಗಡಿಯಲ್ಲಿ ಜ್ಯೋತಿಷ ಹೇಳುತ್ತಿದ್ದರು. ನವೀನ ತೋಟದ ಕೆಲಸ ಮಾಡುತ್ತಿದ್ದ. ಮೃತನಿಗೆ ಮದುವೆಯಾಗಿದ್ದು ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ