ಬೆಂಗಳೂರು: ಮಾಲೀಕನ ಮನೆಯಲ್ಲಿ ವಜ್ರ ಹಾಗೂ ಚಿನ್ನದ ಆಭರಣಗಳನ್ನುಇಡಲಾಗಿದ್ದ ಡಿಜಿಟಲ್ ಲಾಕರ್ ಕಳವು ಮಾಡಿದ್ದ ಆರೋಪಿಯನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕೈಲಾಸ್ದಾಸ್ (35) ಬಂಧಿತ ಆರೋಪಿ. ಜೆ.ಪಿ ನಗರ 3ನೇ ಹಂತದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ ಆರು ವರ್ಷದಿಂದ ಈತ ಅಡುಗೆ ಕೆಲಸ ಮಾಡುತ್ತಿದ್ದ. ಮನೆಯಲ್ಲೇ ವಸತಿ ವ್ಯವಸ್ಥೆಯೂ ನೀಡಿದ್ದರು.
ಮನೆಯ ಸದಸ್ಯರೊಬ್ಬರಿಗೆ ಸೋಂಕು ದೃಢಪಟ್ಟ ಕಾರಣ ಮಾಲೀಕರು ಅವರ ಆರೈಕೆಯತ್ತ ಗಮನ ಹರಿಸಿದ್ದರು. ಈ ಸಮಯವನ್ನೇ ಬಳಸಿಕೊಂಡು, ಮನೆಯಲ್ಲಿ ನವೀಕೃತ ಭದ್ರತಾ ತಂತ್ರಾಂಶವುಳ್ಳ ಡಿಜಿಟಲ್ ಲಾಕರ್ ನಲ್ಲಿ ಇಟ್ಟಿದ್ದ ₹1.30 ಕೋಟಿ ಬೆಲೆ ಬಾಳುವ ವಜ್ರ ಹಾಗೂ ಚಿನ್ನದ ಆಭರಣಗಳನ್ನು ಕದಿಯಲು ಆರೋಪಿ ಯತ್ನಿಸಿದ್ದ.
ಲಾಕರ್ ತೆರೆಯಲು ಸಾಧ್ಯವಾಗದೆ, ತನ್ನ ಕೋಣೆಯಲ್ಲಿ ಇಟ್ಟುಕೊಂಡಿದ್ದ. ಎರಡು ದಿನಗಳ ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿ ಅಲ್ಲಿಂದ ಲಾಕರ್ ನೊಂದಿಗೆ ಪರಾರಿಯಾಗಿದ್ದ. ಈ ದೃಶ್ಯ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾಲೀಕರು ಪೊಲೀಸರು ದೂರು ನೀಡಿದ್ದರು.
ಲಾಕರ್ ನೊಂದಿಗೆ ಮೈಸೂರಿನತ್ತ ತೆರಳಿದ್ದ ಆರೋಪಿ, ಅಲ್ಲಿಯೂ ಲಾಕರ್ ತೆರೆಯಲು ವಿಫಲವಾಗಿದ್ದ. ಬಳಿಕ ಯಶವಂತಪುರ ರೈಲ್ವೆ ನಿಲ್ದಾಣದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿರುವ ಮಾಹಿತಿ ಪಡೆದ ಪೊಲೀಸರು, ಆರೋಪಿಗೂ ಮುನ್ನ ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಕೈಲಾಸ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕರ್ ನಲ್ಲಿದ್ದ ಚಿನ್ನ, ವಜ್ರದ ಆಭರಣಗಳು, ಬೆಳ್ಳಿ ವಿಗ್ರಹ, ₹8.5 ಲಕ್ಷ ನಗದು, 3 ಪಾಸ್ಪೋರ್ಟ್ ಹಾಗೂ ದುಬಾರಿ ಬೆಲೆಯ ಕೈಗಡಿಯಾರಗಳನ್ನು ಜಪ್ತಿ ಮಾಡಿದ್ದಾರೆ.