ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ವಾಪಸು ಹೋಗದೇ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿ ಕರುಣಾಕರ್ (48) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
‘ಹಾವೇರಿ ಜಿಲ್ಲೆಯ ಹಾನಗಲ್ನ ಕರುಣಾಕರ್, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ 1998ರಲ್ಲಿ ನಡೆದಿದ್ದ ಸಂಜೀವ್ ಎಂಬುವರ ಕೊಲೆ ಪ್ರಕರಣದ ಅಪರಾಧಿಯಾಗಿದ್ದ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ತಾಯಿಗೆ ಹುಷಾರಿಲ್ಲದ ಕಾರಣ ನೀಡಿದ್ದ ಕರುಣಾಕರ್, 2008ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ. ಪೆರೋಲ್ ಅವಧಿ ಮುಗಿದರೂ ವಾಪಸು ಜೈಲಿಗೆ ಬಂದಿರಲಿಲ್ಲ. ಆತನ ವಿರುದ್ಧ ಜೈಲಿನ ಅಧಿಕಾರಿಗಳು ಮಡಿವಾಳ ಠಾಣೆಗೆ ದೂರು ನೀಡಿದ್ದರು.’
‘ಕರುಣಾಕರ್, ಹಾವೇರಿಯಲ್ಲಿ ಹೋಟೆಲ್ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಇತ್ತೀಚೆಗೆ ಲಭ್ಯವಾಗಿತ್ತು. ಪೊಲೀಸರ ತಂಡ ಹಾನಗಲ್ಗೆ ಹೋಗಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ‘ ಎಂದೂ ಪೊಲೀಸರು ತಿಳಿಸಿದರು.