ಬೆಂಗಳೂರು: ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳುವುದು ಬಿಟ್ಟು, ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಚುನಾವಣೆ ಪ್ರಚಾರ ಮಾಡಲು ಹೋಗಿದ್ದರು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚುನಾವಣೆ ಪ್ರಚಾರ ಮಾಡಿದ್ದಾರೆ. ಈ ರೀತಿ ಪ್ರಚಾರ ಮಾಡುವುದು ವಿದೇಶಾಂಗ ನೀತಿಯ ಉಲ್ಲಂಘನೆಯಾಗುತ್ತದೆ. ಮತ್ತೊಮ್ಮೆ ಟ್ರಂಪ್ ಎಂಬ ಭಾವನೆ ಬಿತ್ತುವುದು ಸರಿಯಲ್ಲ. ಇದರಿಂದಾಗಿ ಬೇರೆ ದೇಶಗಳು ನಮ್ಮ ದೇಶವನ್ನು ನೀಡುವ ಭಾವನೆ ಬದಲಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿದ್ದು, ಜಿಡಿಪಿ ದರ ಕುಸಿದಿದೆ. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆರ್ಥಿಕತೆ ಚೇತರಿಕೆಗೆ ಸಂಬಂಧಿಸಿದಂತೆ ಪ್ರಮುಖರು ನೀಡಿದ ಸಲಹೆಗಳನ್ನೂ ಮೋದಿ ಪರಿಗಣಿಸಿಲ್ಲ ಎಂದು ಟೀಕಿಸಿದರು.
ಇವಿಎಂ ಬೇಡ: ವಿವಿಧ ರಾಜ್ಯಗಳು ಹಾಗೂ ನಮ್ಮ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಬಾರದು. ಮತ ಪತ್ರಗಳನ್ನು ಬಳಸಬೇಕು. ಇವಿಎಂ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಈ ವ್ಯವಸ್ಥೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ದೆಹಲಿಗೆ ಹೋಗಬೇಕಾದ ಕಾರಣ ಬೆಳಗಾವಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊಯಿಲಿ ಆಕ್ಷೇಪ: ಮತ್ತೊಬ್ಬ ಮುಖಂಡ ವೀರಪ್ಪ ಮೊಯಿಲಿ ಸಹ ಮೋದಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಭೇಟಿಯು ಫಲಪ್ರದವಾಗಿಲ್ಲ. ಇದರಿಂದ ಭಾರತೀಯರಿಗೆ ನಿರಾಶೆಯಾಗಿದೆ ಎಂದು ಟೀಕಿಸಿದ್ದಾರೆ.
ಭಾರತದ ಉತ್ಪನ್ನಗಳ ಆಮದು ಮೇಲಿನ ನಿರ್ಬಂಧ ತೆರವು, ಎಚ್1ಬಿ ವೀಸಾ ನೀಡುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ ಎಂದು ಹೇಳಿದ್ದಾರೆ.