ಬೆಂಗಳೂರು: ಹಣದ ಆಮಿಷವೊಡ್ಡಿ 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಆರೋಪದಡಿ ಗುರುಪ್ರಸಾದ್ (45) ಎಂಬಾತನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
‘ಚಿಕ್ಕಬೆಟ್ಟಹಳ್ಳಿ ನಿವಾಸಿ ಗುರುಪ್ರಸಾದ್, ಜೆಸಿಬಿ ಯಂತ್ರದ ಮಾಲೀಕ. ಬಾಲಕಿಯ ಕುಟುಂಬಕ್ಕೆ ಹಣದ ಆಮಿಷವೊಡ್ಡಿ ವಿವಾಹ ಮಾಡಿ ಕೊಂಡಿದ್ದ. ಆರೋಪಿಯನ್ನು ಬಂಧಿಸಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಯಲಹಂಕ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ತಂದೆ–ತಾಯಿ ವಾಸವಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ದಂಪತಿಗೆ ಬಾಲಕಿ ಸೇರಿ ಮೂವರು ಹೆಣ್ಣುಮಕ್ಕಳಿದ್ದಾರೆ’ ಎಂದು ತಿಳಿಸಿದರು.
ಮದುವೆ ಖರ್ಚಿಗೆಂದು ₹ 15 ಸಾವಿರ ನೀಡಿದ್ದ: ‘ವಿವಾಹಿತನಾಗಿದ್ದ ಗುರುಪ್ರಸಾದ್ 20 ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಾಗಿದ್ದ. ಈತನಿಗೆ 17 ವರ್ಷದ ಮಗನಿದ್ದಾನೆ. ಬಾಲಕಿ ಕುಟುಂಬದ ಬಡತನ ತಿಳಿದುಕೊಂಡಿದ್ದ ಆರೋಪಿ, ಹಣ ನೀಡುವುದಾಗಿ ಹೇಳಿ ಮದುವೆ ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ಬಾಲಕಿ ಮದುವೆಗೆ ಪೋಷಕರು ಆರಂಭದಲ್ಲಿ ಒಪ್ಪಿಗೆ ನೀಡಿರಲಿಲ್ಲ. ಹಲವು ಬಾರಿ ಪೋಷಕರ ಜೊತೆ ಮಾತುಕತೆ ನಡೆಸಿದ್ದ ಆರೋಪಿ, ಅಂತಿಮವಾಗಿ ಮದುವೆಗೆ ಒಪ್ಪಿಸಿದ್ದ. ಮದುವೆ ಖರ್ಚಿಗೆಂದು ₹ 15 ಸಾವಿರ ನೀಡಿದ್ದ. ಸೆ. 7ರಂದು ದೇವಸ್ಥಾನವೊಂದರಲ್ಲಿ ಬಾಲಕಿಯನ್ನು ಮದುವೆಯಾಗಿದ್ದ’ ಎಂದು ಅವರು ತಿಳಿಸಿದರು.