ಬೆಂಗಳೂರು: ಯುವತಿಯನ್ನು ಪ್ರೀತಿಸಿ, ಅವರ ಜೊತೆ ಸಹಜೀವನ ನಡೆಸಿ ಗರ್ಭಿಣಿಯನ್ನಾಗಿ ಮಾಡಿ ಪರಾರಿಯಾಗಿದ್ದ ಆರೋಪಿ ಅರುಣ್ (28) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
‘ಯುವತಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿ ಅರುಣ್ನನ್ನು ಇತ್ತೀಚೆಗೆ ಬಂಧಿಸಲಾಗಿದೆ‘ ಎಂದು ಪೊಲೀಸರು ಹೇಳಿದರು.
‘ಸ್ಥಳೀಯ ನಿವಾಸಿ ಅರುಣ್, ಕಾರ್ಯಕ್ರಮ ಸಂಘಟನೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಅವರಿಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರೂ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಣಕಾಸಿನ ಅಡಚಣೆ ಇರುವುದಾಗಿ ಆರೋಪಿ, ಹಣ ಸಹ ಪಡೆದಿದ್ದ.’
‘ಯುವತಿ ಇತ್ತೀಚೆಗೆ ಗರ್ಭಿಣಿ ಆಗಿದ್ದರು. ಮಗು ತೆಗೆಸುವಂತೆ ಒತ್ತಾಯಿಸಿದ್ದ ಆರೋಪಿ, ಪರಾರಿಯಾಗಿದ್ದ. ಅವರ ಮನೆಯರಿಂದಲೂ ಯುವತಿಗೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ‘ ಎಂದೂ ಪೊಲೀಸರು ತಿಳಿಸಿದರು.