ಬೆಂಗಳೂರು: ರಾಜಗೋಪಾಲನಗರದಲ್ಲಿರುವ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
‘ಮುಖ್ಯರಸ್ತೆಯಲ್ಲಿರುವ ಫೈನಾನ್ಸ್ ಕಚೇರಿಯಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಕಚೇರಿ ಸಿಬ್ಬಂದಿ ನೀಡಿರುವ ದೂರು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಗ್ಯಾಸ್ ಕಟರ್ನಿಂದ ಷಟರ್ ಮುರಿದು ಕಳ್ಳರು ಒಳಗೆ ನುಗ್ಗಿದ್ದರು. ಹಣ ಹಾಗೂ ಚಿನ್ನಾಭರಣ ಇರಿಸಲಾಗಿದ್ದ ಭದ್ರತಾ ಕೊಠಡಿ ಬೀಗ ಮುರಿಯಲು ಯತ್ನಿಸಿದ್ದರು. ಇದೇ ವೇಳೆಯೇ ಸೈರನ್ ಹೊಡೆದುಕೊಂಡಿತ್ತು. ಅದರಿಂದಾಗಿ ಕಳ್ಳರು ಸ್ಥಳದಿಂದ ಓಡಿಹೋಗಿದ್ದಾರೆ.’
‘ಸೈರನ್ ಉಪಕರಣದಿಂದ ಕಚೇರಿ ಅಧಿಕಾರಿಗಳಿಗೆ ತುರ್ತು ಸಂದೇಶ ಬಂದಿತ್ತು. ಅವರೇ ಠಾಣೆಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿದ್ದರು’ ಎಂದೂ ತಿಳಿಸಿದರು.