ಬೆಂಗಳೂರು: ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಜವಾಬ್ದಾರಿಯುತ ಅಧಿಕಾರಿಯೊಬ್ಬರ ಮೂಲಕ ಅಫಿಡವಿಟ್ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸರ್ಕಾರ ಸಲ್ಲಿಸಿದ್ದ ವರದಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಕಾಯ್ದೆ ಉಲ್ಲಂಘಿಸಿ ರಾಜಕೀಯ ರ್ಯಾಲಿ, ಪ್ರತಿಭಟನೆ ಮತ್ತು ಬಂದ್ ನಡೆಸಿರುವ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಿಲ್ಲ ಎಂಬುದನ್ನು ಗಮನಿಸಿ ಈ ಆದೇಶ ನೀಡಿತು.
‘ಮಾಸ್ಕ್ ಧರಿಸದಿರುವುದು ಮತ್ತು ಅಂತರ ಕಾಪಾಡದಿರುವುದು ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧ. ಕಾನೂನು ಉಲ್ಲಂಘನೆ ತಡೆಯುವಂತೆ ಎರಡು ತಿಂಗಳಿಂದಲೂ ರಾಜ್ಯ ಸರ್ಕಾರಕ್ಕೆ ತಿಳಿಸಲಾಗುತ್ತಿದೆ. ಆದರೂ ಪಾಲಿಸಲು ಸರ್ಕಾರ ವಿಫಲವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.
‘ಕಾನೂನು ಜಾರಿಗೆ ಬದ್ಧರಾಗಿರುವ ಬಗ್ಗೆ ಅಫಿಡವಿಟ್ ಮೂಲಕ ಭರವಸೆ ನೀಡಬೇಕು. ಅದಕ್ಕಾಗಿ ಜವಾಬ್ದಾರಿಯುತ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಒಂದು ವಾರದಲ್ಲಿ ನ್ಯಾಯಾಲಯಕ್ಕೆಅಫಿಡವಿಟ್ ಸಲ್ಲಿಕೆಯಾಗಬೇಕು’ ಎಂದು ತಿಳಿಸಿತು.
‘ಬಂದ್ ಸಂದರ್ಭದಲ್ಲಿ ಸಭೆ ಆಯೋಜನೆಗೊಂಡಿರಲಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ, ‘ಒಂದು ಸಭೆ ನಡೆದ ನಂತರವೇ ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹೊಸ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿತು. ಜ.25ಕ್ಕೆ ವಿಚಾರಣೆ ಮುಂದೂಡಿತು.