ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕರಿಗೆ ಸಮಾಜದ ನೆರವಿನ ಗೌರವ

ಅಖಿಲ ಭಾರತ ಆಗ್ರಹ ದಿನವಾಗಿ ಕಾರ್ಮಿಕರ ದಿನ ಆಚರಣೆ
Last Updated 1 ಮೇ 2020, 22:26 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ವಿವಿಧ ರೀತಿಯ ನೆರವು ನೀಡುವ ಮೂಲಕ ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಶುಕ್ರವಾರ ಕಾರ್ಮಿಕರ ದಿನ ಆಚರಿಸಿದವು.

ಸಾರ್ವಜನಿಕ ಸಭೆ–ಸಮಾರಂಭ ನಡೆಸಲು ನಿರ್ಬಂಧ ಇರುವುದರಿಂದ ಅಖಿಲ ಭಾರತ ಯುವ ಪ್ರಜಾಸತ್ತಾತ್ಮಕ ಸಂಘಟನೆಯು (ಎಐಡಿವೈಒ) ಆನ್‌ಲೈನ್‌ನಲ್ಲಿಯೇ ‘ಅಖಿಲ ಭಾರತ ಆಗ್ರಹ’ ದಿನ ಎಂದು ಕಾರ್ಮಿಕ ದಿನವನ್ನು ಆಚರಿಸಿತು.

ರಾಜ್ಯದ ವಿವಿಧ ಜಿಲ್ಲೆಗಳ ಎಲ್ಲಾ ಸ್ತರಗಳಿಗೆ ಸೇರಿದ ವಿದ್ಯಾರ್ಥಿ, ಯುವಜನ, ಕಾರ್ಮಿಕ, ರೈತರು ಮತ್ತು ಮಹಿಳೆಯರು ತಮ್ಮ ಮನೆಗಳಿಂದಲೇ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು ಹಾಗೂ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನೂ ಸಹ ಸಲ್ಲಿಸಲಾಯಿತು.

‘ರಾಜ್ಯದಲ್ಲಿ ಸುಮಾರು 30ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದಾರೆ, ಇವರಲ್ಲಿ ಅರ್ಧದಷ್ಟು ಜನರು ವಲಸಿಗ ಕಾರ್ಮಿಕರು. ರಾಜ್ಯದಲ್ಲಿ 3.25 ಕೋಟಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿದ್ದಾರೆ. ಅದರಲ್ಲಿ ಶೇ.85ರಷ್ಟು ದಿನಗೂಲಿಗಳು. ಅಂದರೆ, ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಮತ್ತು ಸಫಾಯಿ ಕರ್ಮಚಾರಿಗಳು, ಮನೆಗೆಲಸದವರು, ಸಣ್ಣಪುಟ್ಟ ಕಸುಬುಗಳನ್ನು ನೆಚ್ಚಿಕೊಂಡವರು, ಸಣ್ಣರೈತರು, ಕೃಷಿಕೂಲಿ ಕಾರ್ಮಿಕರು, ಇ-ಕಾಮರ್ಸ್ ಮತ್ತು ಇತರೆ ಆರ್ಥಿಕತೆಯ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಬದುಕನ್ನು ಕೊರೋನಾ ಲಾಕ್‍ಡೌನ್ ಕಸಿದುಕೊಂಡಿದೆ’ ಎಂದು ಸಂಘಟನೆಯ ಸದಸ್ಯ ವಿನಯ್‌ ಸಾರಥಿ ದೂರಿದರು.

ಮನೆಗೆಲಸದವರ ಪ್ರತಿಭಟನೆ:ಪೂರ್ಣ ವೇತನ ಮತ್ತು ಪರಿಹಾರ ಪ್ಯಾಕೇಜ್‌ ವಿತರಿಸಬೇಕು ಎಂದು ಒತ್ತಾಯಿಸಿ, ಮನೆಗೆಲಸದವರ ಹಕ್ಕುಗಳ ಒಕ್ಕೂಟದ ಸದಸ್ಯರು ಶುಕ್ರವಾರ ಕೆಂಪು ಸೀರೆಯುಟ್ಟು ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಮುಖಗವಸು ಧರಿಸಿಕೊಂಡು, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುತ್ತಲೇ ಆಯಾ ಪ್ರದೇಶದಲ್ಲಿಯೇ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಮನೆಗೆಲಸದವರಿಗೂ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯದಂತೆ ಮಾಲೀಕರಿಗೆ ಸೂಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪೌರ ಕಾರ್ಮಿಕರಿಗೆ ಗೌರವ:ಕಾರ್ಮಿಕರ ದಿನಾಚರಣೆ ನಿಮಿತ್ತ ನಗರದ ಡಾಲರ್‌ ಕಾಲೊನಿಯಲ್ಲಿ ಪೌರ ಕಾರ್ಮಿಕರಿಗೆ ಹಣ್ಣು, ಶಾಲು ನೀಡಿ ಗೌರವಿಸಲಾಯಿತು.

ಜಯಪ್ರಕಾಶ್‌ ವೇದಿಕೆಯ ಮಳವಳ್ಳಿ ಶಿವಣ್ಣ ಅವರು ಪೌರಕಾರ್ಮಿಕರಿಗೆ ಹಣ್ಣು, ಶಾಲು ಮತ್ತು ನೀರಿನ ಬಾಟಲಿ, ಮುಖಗವಸುಗಳನ್ನು ವಿತರಿಸುವ ಮೂಲಕ ಕಾರ್ಮಿಕರ ದಿನವನ್ನು ವಿಭಿನ್ನವಾಗಿ ಆಚರಿಸಿದರು.

ವಿವಿಧ ಸರ್ಕಾರೇತರ ಸಂಸ್ಥೆಗಳು ಕಾರ್ಮಿಕರಿಗೆ ಆಹಾರ, ದಿನಸಿಯನ್ನು ವಿತರಿಸುವ ಮೂಲಕ ಕಾರ್ಮಿಕ ದಿನವನ್ನು ಆಚರಿಸಿದವು.

ಕಾಂಗ್ರೆಸ್‌ನಿಂದ ಆಚರಣೆ: ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕಾರ್ಮಿಕರ ದಿನವನ್ನು ಸರಳವಾಗಿ ಆಚರಿಸಲಾಯಿತು.ಕೆಪಿಸಿಸಿ ಕಾರ್ಮಿಕ ವಿಭಾಗ ಮತ್ತು ಐಎನ್‌ಟಿಯುಸಿ ರಾಜ್ಯಾಧ್ಯಕ್ಷರಾದ ಎಸ್.ಎಎಸ್. ಪ್ರಕಾಶಂ, ‘ಎರಡನೆಯ ಮಹಾಯುದ್ಧದ ನಂತರ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾರ್ಮಿಕ ಸಮುದಾಯ ಅತ್ಯಂತ ಕಠಿಣ ಸವಾಲು ಎದುರಿಸುತ್ತಿದೆ. ದೇಶವನ್ನು ಕಟ್ಟಿದವರು ಕಾರ್ಮಿಕರು. ಪ್ರತಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಎಲ್ಲ ಕಾರ್ಮಿಕ ಸಂಘಟನೆಗಳಿಗೆ ಇದು ನಿರ್ಣಾಯಕ ಘಟ್ಟ’ ಎಂದರು.

‘ಕಾರ್ಮಿಕರ ಹಿತರಕ್ಷಣೆಗೆ ಕಾಂಗ್ರೆಸ್‌ ಹೋರಾಡಲಿದೆ’ ಎಂದು ಭರವಸೆ ನೀಡಿದರು.

ಐಎನ್‌ಟಿಯುಸಿರಾಜ್ಯ ಪ್ರಧಾನಕಾರ್ಯದರ್ಶಿಎನ್.ಎಂ. ಮುದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಎಐಡಿವೈಒ ಆಗ್ರಹ

*ಕೋವಿಡ್‌–19 ಪರೀಕ್ಷೆ ಉಚಿತಗೊಳಿಸಬೇಕು

*ವಲಸೆ ಕಾರ್ಮಿಕರು, ದಿನಗೂಲಿಗಳು, ಇ-ಕಾಮರ್ಸ್ ಕಾರ್ಮಿಕರನ್ನು ರಕ್ಷಿಸಬೇಕು

*ಎಲ್ಲರ ಉದ್ಯೋಗ ರಕ್ಷಿಸಬೇಕು–ಪೂರ್ಣ ವೇತನ ನೀಡಬೇಕು

*ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ಧಾನ್ಯ ಬಡವರಿಗೆ ಹಂಚಬೇಕು

*ನಿರುದ್ಯೋಗಿಗಳಿಗೆಜನ್‍ಧನ್‌ ಖಾತೆದಾರರಿಗೆ ಮುಂದಿನ ಕನಿಷ್ಠ 6 ತಿಂಗಳು ಮಾಸಿಕ ₹5000 ಸಹಾಯ ಪ್ಯಾಕೇಜ್ ನೀಡಬೇಕು

*ನರೇಗಾ ಅಡಿಯಲ್ಲಿ ಕನಿಷ್ಠ ದುಡಿಯವ ದಿನಗಳ ಸಂಖ್ಯೆಯನ್ನು 200 ದಿನಗಳಿಗೆ ಏರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT