ನವದೆಹಲಿ: ಕಾಂಗ್ರೆಸ್ ಸೇವಾದಳ ದೇಶದ ಒಂದು ಸಾವಿರ ನಗರಗಳಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರ ‘ಧ್ವಜ ವಂದನಾ’ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿದೆ. ಆರ್ಎಸ್ಎಸ್ನ ರಾಷ್ಟ್ರೀಯತೆಯ ಚಿಂತನೆಗೆ ಪ್ರತಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಅದು ಯೋಜಿಸುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಪ್ಪಿಗೆ ಸೂಚಿಸುತ್ತಿದ್ದಂತೆ ಈ ಕುರಿತು ಸೇವಾದಳ ಮುಂದಿನ ಕ್ರಮ ಕೈಗೊಳ್ಳಲಿದೆ.
ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರ ತತ್ವಗಳು ಹಾಗೂ ಜಾತ್ಯತೀತ, ಸಹಿಷ್ಣುತೆ, ಬಹುತ್ವ ಕುರಿತು ಈ ಕಾರ್ಯಕ್ರಮದ ವೇಳೆ ಚರ್ಚೆ ನಡೆಸಲಾಗುವುದು ಎಂದು ಸೇವಾದಳದ ಮುಖ್ಯ ಆಯೋಜಕ ಲಾಲ್ಜಿ ಭಾಯಿ ದೇಸಾಯಿ ಹೇಳಿದ್ದಾರೆ.
‘ಕಳೆದ ಕೆಲವು ವರ್ಷಗಳಿಂದ ಸೇವಾದಳ ಮೊದಲಿನಷ್ಟು ಸಕ್ರಿಯವಾಗಿರಲಿಲ್ಲ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಆಯೋಜಿಸಲು ಮಾತ್ರ ಅದು ಸೀಮಿತವಾಗಿತ್ತು. ನಾವು ಪುನಃ ಸೇವಾದಳವನ್ನು ಬಲಪಡಿಸಲು ಯತ್ನಿಸುತ್ತಿದ್ದೇವೆ. ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಮಹತ್ವ ನೀಡುತ್ತೇವೆ’ ಎಂದು ಹೇಳಿದ್ದಾರೆ.