ಬೆಂಗಳೂರು: ಕೋವಿಡ್–19 ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಕೇಂದ್ರದ ಉಚಿತ ಆರೋಗ್ಯ ವಿಮಾ ವ್ಯಾಪ್ತಿಗೆ ಸೇರಿಸುವ ಕುರಿತು ಪ್ರಯತ್ನ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಬುಧವಾರ ಯಡಿಯೂರಪ್ಪ ಸ್ಪಂದಿಸಿದರು. ‘ಕೇಂದ್ರ ಸರ್ಕಾರ ಮಾಧ್ಯಮವನ್ನು ಅಗತ್ಯ ಸೇವೆಯಲ್ಲಿ ಸೇರಿಸಿದೆ. ಆದರೆ, ಉಚಿತ ಆರೋಗ್ಯ ವಿಮೆ ಯೋಜನೆಗೆ ಸೇರಿಸಿಲ್ಲ. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಬೇಕು’ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.
ಕರ್ತವ್ಯದ ವೇಳೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪುವ ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸರಿಗೆ ಈ ವಿಮಾ ಯೋಜನೆಯಡಿ ₹30 ಲಕ್ಷ ಪರಿಹಾರ ನೀಡಲಾಗುತ್ತದೆ. ಇದು ಪತ್ರಕರ್ತರಿಗೂ ಅನ್ವಯ ಆಗಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.