ಬೆಂಗಳೂರು: ‘ಮಾನಸಿಕ ಆರೋಗ್ಯ ಪಾಲನೆ ಕಾಯ್ದೆ-2017ರಡಿ ರಾಜ್ಯ ಸರ್ಕಾರವು ರೂಪಿಸಿರುವ ನಿಯಮಗಳಿಗೆ ಮಾರ್ಚ್ 21ರೊಳಗೆ ಅನುಮೋದನೆ ನೀಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಗಡುವು ನೀಡಿದೆ.
ಈ ಕುರಿತಂತೆ ಎನ್.ಸಂಜಯ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವೈ.ಎಚ್. ವಿಜಯಕುಮಾರ್ ಅವರು, ‘ನಿಯಮಗಳನ್ನು ರೂಪಿಸಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ 2019ರ ಡಿಸೆಂಬರ್ 26ರಂದು ಕಳುಹಿಸಿಕೊಡಲಾಗಿದೆ. ಆದರೆ, ಈವರೆಗೆ ಅನುಮೋದನೆ ಸಿಕ್ಕಿಲ್ಲ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಜ್ಯ ಸರ್ಕಾರ 2019ರ ಡಿಸೆಂಬರ್ 26ರಂದು ಸಲ್ಲಿಸಿರುವ ಪ್ರಸ್ತಾವನೆ ಒಪ್ಪಿಗೆ ನೀಡಬೇಕು’ ಎಂದು ಕೇಂದ್ರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.