ಬೆಂಗಳೂರು: ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜೀವಿಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶೋಕ ತಿಳಿಸಿದರು.
ಕೆ.ಆರ್.ಪುರ ಸಮೀಪದ ಎ.ನಾರಾಯಣಪುರ ಕ್ಯಾಪಿಟಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ, ಅದಕ್ಕೆ ಪ್ರೋತ್ಸಾಹ ನೀಡಿದರೆ ಆ ಕ್ಷೇತ್ರದಲ್ಲಿ ಸಾಧಕರಾಗಿ ಬೆಳೆಯಲು ನೆರವಾಗುತ್ತದೆ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಅವಕಾಶ ಪೋಷಕರ ಕೈಯಲ್ಲಿಯೇ ಇದೆ’ ಎಂದು ಸಲಹೆ ನೀಡಿದರು.
ಕ್ಯಾಪಿಟಲ್ ಶಾಲೆಯ ಕಾರ್ಯದರ್ಶಿ ಆರ್.ಕೆ. ರಮೇಶ್, ‘ಮಕ್ಕಳ ಕಲಿಕೆಗೆ ಉತ್ತಮ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಓದು ಮೊದಲ ಆದ್ಯತೆ ಆಗುವ ವಾತಾವರಣ ಮನೆಯಲ್ಲಿರಬೇಕು’ ಎಂದರು.