ಬೆಂಗಳೂರು: ಅಶೋಕ ನಗರ ಸಂಚಾರ ಠಾಣೆ ವ್ಯಾಪ್ತಿಯ ವೆಲ್ಲಾರ ಜಂಕ್ಷನ್ನಲ್ಲಿ 2ನೇ ಹಂತದ ಮೆಟ್ರೊ ಕಾಮಗಾರಿ ಆರಂಭವಾಗಲಿದ್ದು, ಈ ಸಲುವಾಗಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
‘ವೆಲ್ಲಾರ ಜಂಕ್ಷನ್ನಲ್ಲಿ ನೆಲದಡಿಯ ಮೆಟ್ರೊ ನಿಲ್ದಾಣ ನಿರ್ಮಾಣ ಕೆಲಸ ನಡೆಯಲಿದೆ. ಕ್ಯಾಂಬೆಲ್ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಹೊಸೂರು– ಲಷ್ಕರ್ ರಸ್ತೆಯ ಜಾನ್ಸನ್ ಜಂಕ್ಷನ್ ಬಳಿಯ ಸ್ವಲ್ಪ ಭಾಗದಲ್ಲಿ ಸಂಚಾರ ನಿರ್ಬಂಧಿಸಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
‘ಹೊಸೂರು ರಸ್ತೆಯಲ್ಲಿ ಆನೇಪಾಳ್ಯ ಮಾರ್ಗವಾಗಿ ಬಂದು ಜಾನ್ಸನ್ ಮಾರ್ಕೆಟ್ ಬಳಿ ಬಲ ತಿರುವು ಪಡೆದು ಕ್ಯಾಂಬೆಲ್ ರಸ್ತೆಯ ಮಾರ್ಗದಲ್ಲಿ ಹೋಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.’
‘ಅಶೋಕನಗರ ಸಿಗ್ನಲ್ ಲೈಟ್ ಜಂಕ್ಷನ್, ಹಳೇ ಪಿಎಸ್ ಜಂಕ್ಷನ್, ಆಶೀರ್ವಾದ ವೃತ್ತ, ರೆಸಿಡೆನ್ಸಿ ರಸ್ತೆ, ಸೆಂಟ್ರಲ್ ಮಾಲ್, ಕಮಿಷನರೇಟ್ ರಸ್ತೆ, ಡಿಸೋಜ ರಸ್ತೆ, ರಿಚ್ಮಂಡ್ ರಸ್ತೆ, ಮದರ್ ಥೆರೆಸಾ ವೃತ್ತದ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಅವರು ವಿವರಿಸಿದರು.