ರಾಜರಾಜೇಶ್ವರಿನಗರ: ಹಬ್ಬ ಹರಿದಿನಗಳಲ್ಲಿ ಉಡುಗೊರೆ ನೀಡುವುದು, ಸಿಹಿ ಹಂಚಿ ಭೇದ–ಭಾವವಿಲ್ಲದೆ ಸಂಭ್ರಮಿಸುವುದು ಸನಾತನ ಸಂಪ್ರದಾಯದ ಭಾಗವಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೇರೋಹಳ್ಳಿ ವಾರ್ಡಿನ ಸುಮಾರು ಹತ್ತು ಸಾವಿರ ಕುಟುಂಬಗಳಿಗೆ ಎಳ್ಳು-ಬೆಲ್ಲ, ಕಬ್ಬು, ಗೆಣಸು, ಕಡಲೇಕಾಯಿ, ಅವರೇಕಾಯಿ ಇದ್ದ ಕಿಟ್ಅನ್ನು ವಿತರಿಸಿ ಅವರು ಮಾತನಾಡಿದರು.
‘ರಾಜಾಳ್ವಿಕೆಯ ಕಾಲದಿಂದ ನಾಡಿನಲ್ಲಿ ವಸ್ತ್ರ, ದವಸ–ಧಾನ್ಯಗಳನ್ನು ಅರಸರು ದಾನವಾಗಿ ನೀಡುತ್ತಿದ್ದರು. ಆರ್ಥಿಕ ದುರ್ಬಲರಿಗೆ ಸಹಾಯಹಸ್ತ ಚಾಚುವ ಸತ್ಸಂಪ್ರದಾಯವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರದೊಂದಿಗೆ ಮುಂದುವರಿಸಲಾಗಿದೆ’ ಎಂದು ಅವರು ಹೇಳಿದರು.
ಬಿಜೆಪಿ ಯುವ ಮುಖಂಡ ನಿಶಾಂತ್ ಸೋಮಶೇಖರ್, ಹೇರೋಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ಎಂ.ಜಿ.ರವಿಶಂಕರ್, ಕರ್ನಾಟಕ ವಸತಿ ಮಹಾಮಂಡಲದ ನಿರ್ದೇಶಕ ವಿ.ರಘು, ಬಿಜೆಪಿ ಮುಖಂಡ ಅಂಜನ್ಕುಮಾರ್, ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ, ಮುಖಂಡರಾದ ರಘುನಂದನ್, ನಾಗವೇಣಿ ಮತ್ತಿತರು ಈ ವೇಳೆ ಹಾಜರಿದ್ದರು.