ಬೆಂಗಳೂರು: ಸುಲಿಗೆ ಹಾಗೂ ಕೊಲೆಗೆ ಯತ್ನಿಸಿ ಸಾರ್ವಜನಿಕರಿಂದ ಮೊಬೈಲ್ಗಳನ್ನು ದೋಚಿ ಹೊರರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ಅಶೋಕನಗರ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಗಜೀವನ್ರಾಂ ನಗರದ ಕಾಸಿಪ್ ಖಾನ್ (24), ಗೋರಿಪಾಳ್ಯದ ಮರ್ದಾನ್ ಪಾಷ (19), ಪಾದರಾಯನಪುರದ ಅಪ್ಪು ಅಲಿಯಾಸ್ ಸ್ವಾಮಿ (28) ಹಾಗೂ ಕಾಟನ್ಪೇಟೆಯ ವಿ.ಎಂ. ಅಬ್ದುಲ್ ಹಮೀದ್ (37) ಬಂಧಿತರು. ಇವರಿಂದ ₹40 ಲಕ್ಷ ಮೌಲ್ಯದ 317 ಮೊಬೈಲ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
‘ನಗರದ ಹಲವೆಡೆ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪಿಗಳು ಅವರ ಮೊಬೈಲ್ ಕಿತ್ತುಕೊಳ್ಳುತ್ತಿದ್ದರು. ಕೆಲವೆಡೆ ಸಾರ್ವಜನಿಕರ ಮೇಲೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಕಾಸಿಪ್ ಕ್ಷೌರ ಅಂಗಡಿ ಇಟ್ಟುಕೊಂಡಿದ್ದ. ಮರ್ದಾನ್ ಎಲೆಕ್ಟ್ರಿಷಿಯನ್ ಆಗಿದ್ದ. ಅಪ್ಪು ವೆಲ್ಡಿಂಗ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಅಬ್ದುಲ್ ಹಮೀದ್ ಮೊಬೈಲ್ ಸೇವಾ ಮಳಿಗೆ ಇಟ್ಟುಕೊಂಡಿದ್ದ’ ಎಂದು ಮಾಹಿತಿ ನೀಡಿದರು.
ಕದ್ದ ವಾಹನದಲ್ಲೇ ಸುಲಿಗೆ: ‘ಕಾಸಿಪ್ ಖಾನ್, ಮರ್ದಾನ್ ಪಾಷ ಹಾಗೂ ಪಾದರಾಯನಪುರದ ಅಪ್ಪು ಸಾರ್ವಜನಿಕರಿಗೆ ಜೀವ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದರು. ಅದಕ್ಕೆಂದೇ ದ್ವಿಚಕ್ರ ವಾಹನವೊಂದನ್ನು ಕದ್ದಿದ್ದರು. ಅದರಲ್ಲೇ ಸುತ್ತಾಡಿ ನಿರ್ಜನ ಪ್ರದೇಶ ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಮೊಬೈಲ್ ಕಸಿದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಮೊಬೈಲ್ಗಳನ್ನು ಆರೋಪಿಗಳುಅಬ್ದುಲ್ ಹಮೀದ್ಗೆ ಕೊಡುತ್ತಿದ್ದರು. ಆತ ಅವುಗಳನ್ನು ಹೈದರಾಬಾದ್, ಮುಂಬೈಗೆ ಕಳುಹಿಸುತ್ತಿದ್ದ. ಅಲ್ಲಿರುವ ತಂಡದ ಸದಸ್ಯರು ಆ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು’ ಎಂದರು.