ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಹಿಂಬಾಲಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ: ಎಂಬಿಬಿಎಸ್ ಪದವೀಧರ ಬಂಧನ

Last Updated 15 ಡಿಸೆಂಬರ್ 2021, 2:26 IST
ಅಕ್ಷರ ಗಾತ್ರ

ಬೆಂಗಳೂರು: ಕಾರಿನಲ್ಲಿ ಹೊರಟಿದ್ದ ಮಹಿಳೆ ಹಾಗೂ ಅವರ ಮಕ್ಕಳನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ವಿಜಯ್ ಭಾರದ್ವಾಜ್ (30) ಎಂಬುವವರನ್ನು ಅಮೃತಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಬಿಹಾರದ ವಿಜಯ್, ಎಂಬಿಬಿಎಸ್ ಪದವೀಧರ. ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಎಂ.ಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಅವರು, ಜಯನಗರದಲ್ಲಿ ವಾಸವಿದ್ದರು. ಸಂತ್ರಸ್ತ ಮಹಿಳೆ ನೀಡಿದ್ದ ದೂರಿನಡಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಸದ್ಯದಲ್ಲೇ ಹಾಜರುಪಡಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಗರದ ನಿವಾಸಿಯಾದ ಮಹಿಳೆ, ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಡಿ. 11ರಂದು ಬೆಳಿಗ್ಗೆ ಹೊಸಕೋಟೆಗೆ ಕಾರಿನಲ್ಲಿ ಮಗಳು ಹಾಗೂ ಮಗ ಜೊತೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ರಾತ್ರಿ ಬೆಂಗಳೂರಿಗೆ ಮರಳುತ್ತಿದ್ದರು’ ಎಂದೂ ತಿಳಿಸಿದರು.

‘ಹೆಬ್ಬಾಳ ವೃತ್ತದ ಬಳಿ ಕಾರು ಪಂಕ್ಚರ್ ಆಗಿತ್ತು. ಮಹಿಳೆ, ಚಕ್ರ ಬದಲಿಸುತ್ತಿದ್ದರು. ಅದೇ ಸಂದರ್ಭದಲ್ಲೇ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಅಸಭ್ಯವಾಗಿ ಸನ್ನೆ ಮಾಡಿ ಕೂಗಿದ್ದರು. ಅದನ್ನು ಪ್ರಶ್ನಿಸಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು’ ಎಂದೂ ಅಧಿಕಾರಿ ಹೇಳಿದರು.

ಪೊಲೀಸರು ಬರುತ್ತಿದ್ದಂತೆ ಪರಾರಿ: ‘ಚಕ್ರ ಬದಲಿಸಿದ್ದ ಮಹಿಳೆ, ಕಾರು ಏರಿ ಸ್ಥಳದಿಂದ ಹೊರಟಿದ್ದರು. ಅವರನ್ನು ಆರೋಪಿ ಹಿಂಬಾಲಿಸಲಾರಂಭಿಸಿದ್ದರು. ಗಾಬರಿಗೊಂಡ ಮಹಿಳೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೋರಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಹೊರ ವರ್ತುಲ ರಸ್ತೆಯಲ್ಲಿ ಹೆಬ್ಬಾಳ ವೃತ್ತದಿಂದ ಗೊರಗುಂಟೆಪಾಳ್ಯ ವೃತ್ತಕ್ಕೆ ಮಹಿಳೆ ಕಾರು ಬಂದಿತ್ತು. ಅಲ್ಲಿಯೇ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸಹಾಯಕ್ಕೆ ಹೋಗಿದ್ದರು. ಅವರನ್ನು ನೋಡಿ ಆರೋಪಿ ಕಾರು ಸಮೇತ ಪರಾರಿಯಾಗಿದ್ದ’ ಎಂದೂ ವಿವರಿಸಿದರು.

‘ತಡರಾತ್ರಿಯಾಗಿದ್ದರಿಂದ ಮಹಿಳೆ ಹಾಗೂ ಅವರ ಮಕ್ಕಳಿಗೆ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಆಶ್ರಯ ನೀಡಲಾಗಿತ್ತು. ಮರುದಿನ ಬೆಳಿಗ್ಗೆ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT