ಕೊಪ್ಪಳ: ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಹಣ ನೀಡುವಂತೆ ಪತ್ರ ಕಳಿಸಿ ಹಾಗೂ ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕಿದ್ದ ನಾಲ್ವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಇಶಾಕ್ ಎಂ. ಜಯರಾಜ್, ಎರ್ರಿಸ್ವಾಮಿ ಬಿಲಗಾರ, ಮಹ್ಮಮದ್ ನಾದಿಕ್, ಮಹಮ್ಮದ್ ಫಾರೂಕ್ ಬಂಧಿತರು. ಮಧು ಬಿ.ಪಿ ಮತ್ತು ನಾಗರಾಜ ತಿಪ್ಪನಗೌಡರ ಎಂಬುವರನ್ನು ಬೆದರಿಸಿ ಪತ್ರವನ್ನು ಶಾಸಕರ ಮನೆಗೆ ತಲುಪಿಸುವಂತೆ ಒತ್ತಡ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪತ್ರದಲ್ಲಿ ಶಾಸಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ₹500 ಮುಖಬೆಲೆಯ 4 ಖೋಟಾ ನೋಟು ಇಟ್ಟಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.