ಬೆಂಗಳೂರು: ‘ಪ್ರಕರಣವೊಂದರಲ್ಲಿ ಎಫ್ಐಅರ್ ಠಾಣಾಧಿಕಾರಿಗೆ ರಾಜ್ಯ ಹೈಕೋರ್ಟ್ನ ಕಲಬುರ್ಗಿ ಪೀಠವು ಕಸಗುಡಿಸುವ ಶಿಕ್ಷೆ ವಿಧಿಸಿರುವುದಕ್ಕೆರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ‘ಕಸಗುಡಿಸುವುದು ಶಿಕ್ಷೆ ಎಂದಾದರೆ ನಿತ್ಯ ಈ ಕೆಲಸ ಮಾಡಿರುವ ಪೌರ ಕಾರ್ಮಿಕರು ಮಾಡಿರುವ ತಪ್ಪುಗಳಾದರೂ ಏನು’ ಎಂದು ಸಂಘವು ಪ್ರಶ್ನಿಸಿದೆ.
‘ನಾಗರಿಕ ಸಮಾಜದ ಆರೋಗ್ಯವನ್ನು ಕಾಪಾಡಲು ತಮ್ಮ ಪ್ರಾಣಗಳನ್ನು ಒತ್ತೆ ಇಟ್ಟು ಕೋವಿಡ್, ಚಿಕೂನ್ಗುನ್ಯಾ, ಮಲೇರಿಯಾಗಳಂತಹ ಸಂದರ್ಭಗಳಲ್ಲಿ ಊರಿನ ಕಸಗುಡಿಸುವ ಪೌರಕಾರ್ಮಿಕರಿಗೆ ಗೌರವಾನ್ವಿತ ನ್ಯಾಯಮೂರ್ತಿಗಳ ಹಾಗೂ ನ್ಯಾಯಪೀಠದ ಈ ಅಭಿಪ್ರಾಯ ನೋವು ಹಾಗೂ ಅವಮಾನ ಉಂಟುಮಾಡಿದೆ’ ಎಂದು ಸಿಐಟಿಯು ರಾಜ್ಯ ಸಮಿತಿಯ ಸಂಘ ಬೇಸರ ವ್ಯಕ್ತಪಡಿಸಿದೆ.
‘ನಾಗರಿಕ ಸಮಾಜ ಮತ್ತು ಸರ್ಕಾರಗಳು ಸ್ವಚ್ಛತಾ ಕಾರ್ಯದ ಬಗ್ಗೆ, ಈ ಕೆಲಸ ಮಾಡುವವರ ಬಗ್ಗೆ ತಾತ್ಸಾರ ಮತ್ತು ಕೀಳು ಭಾವನೆ ಹೊಂದಿರುವುದರ ಪ್ರತೀಕವೇ ಇಂತಹ ಮನಸ್ಥಿತಿಗೆ ಕಾರಣ’ ಎಂದು ಸಂಘವು ಹೇಳಿದೆ. ‘ಊರನ್ನು ಸ್ವಚ್ಛಗೊಳಿಸದೆ ಪೌರ ಕಾರ್ಮಿಕರು ಕೆಲಸ ನಿಲ್ಲಿಸಿದರೆ ಎಲ್ಲೆಡೆ ಕೊಳಕು ತುಂಬಿ, ಜನ ರೋಗರುಜಿನಗಳಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದೂ ಸಂಘ ನೆನಪಿಸಿದೆ.
‘ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಕನಿಷ್ಠ ಕೂಲಿ ಪಡೆದು, ಸುರಕ್ಷತಾ ಸಾಮಗ್ರಿಗಳೂ ಇಲ್ಲದೆಯೇ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮನವಿ ಮಾಡಿದ್ದಾರೆ.