ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಕ್ಕೆ ಕರೆದೊಯ್ದು ಪತ್ನಿ ಕೊಲೆ

ಸಿನಿಮೀಯ ಶೈಲಿಯಲ್ಲಿ ಜ್ಯೋತಿಕುಮಾರಿ ಹತ್ಯೆ ಮಾಡಿದ್ದ ಪೃಥ್ವಿರಾಜ್‌
Last Updated 17 ಆಗಸ್ಟ್ 2022, 15:34 IST
ಅಕ್ಷರ ಗಾತ್ರ

ಬೆಂಗಳೂರು: ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ್ದ ಬಿಹಾರದ ಪೃಥ್ವಿರಾಜ್‌ (23) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ಕುಮಾರಿ (38) ಕೊಲೆಯಾದವರು.

‘ಪೃಥ್ವಿರಾಜ್ ಹಾಗೂ ಜ್ಯೋತಿ ಕುಮಾರಿ ಇಬ್ಬರೂ ಬಿಹಾರದವರು. ಇಬ್ಬರ ಮಧ್ಯೆ ವಯಸ್ಸಿನ ಅಂತರವಿದ್ದರೂ ಪರಸ್ಪರ ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಜ್ಯೋತಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದರೂ ಯಶಸ್ವಿಯಾಗಿರಲಿಲ್ಲ. ಬಳಿಕ ಜ್ಯೋತಿಗೆ ಪುಟ್ಟರಾಜ್‌ ಎಂಬ ಯುವಕನ ಪರಿಚಯವಾಗಿತ್ತು. ಇವರಿಬ್ಬರೂ ಸಲುಗೆಯಿಂದ ಮಾತುಕತೆ ನಡೆಸುವುದನ್ನು ಕಂಡು ಪೃಥ್ವಿರಾಜ್‌ ಬೇಸರಗೊಂಡಿದ್ದ. ಇಬ್ಬರ ಮಧ್ಯೆ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬಿಹಾರದ ಸ್ನೇಹಿತ ಸಮೀರ್‌ಕುಮಾರ್‌ ಎಂಬಾತನೊಂದಿಗೆ ಸೇರಿಕೊಂಡು ಆಗಸ್ಟ್‌ 1ರಂದು ಮಲ್ಪೆಯ ಪ್ರವಾಸಕ್ಕೆ ಮೂವರೂ ಜೂಮ್‌ ಕಾರಿನಲ್ಲಿ ತೆರಳಿದ್ದರು. ಆಳ ಸಮುದ್ರಕ್ಕೆ ತಳ್ಳಿ ಕೊಲೆ ಮಾಡುವ ಯೋಜನೆಯಿತ್ತು. ಆದರೆ, ಆಗಸ್ಟ್‌ 2ರಂದು ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರ ಪರಿಣಾಮ ಸಮುದ್ರಕ್ಕೆ ಇಳಿಯುವುದಕ್ಕೆ ನಿರ್ಬಂಧವಿತ್ತು. ತಕ್ಷಣವೇ ತಮ್ಮ ಯೋಜನೆ ಬದಲಾಯಿಸಿ ಬೆಂಗಳೂರಿಗೆ ವಾಪಸ್‌ ಬರುವಾಗ ಶಿರಾಡಿ ಘಾಟ್‌ನ ರಾಜಘಟ್ಟ ಎಂಬಲ್ಲಿ ದುಪಟ್ಟಾದಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಎಸೆದು ಸುಳಿವು ಸಿಗದಂತೆ ಮಾಡಲಾಗಿತ್ತು. ಬೆಂಗಳೂರಿಗೆ ವಾಪಸ್‌ ಬಂದು ಪತ್ನಿ ಕಾಣೆಯಾಗಿದ್ದಾರೆಂದು ಪೃಥ್ವಿರಾಜ್‌ ದೂರು ನೀಡಿದ್ದ.’

‘ಮೂವರೂ ಕಾರನ್ನೇರಿ ತೆರಳುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಾಪಸ್‌ ಬರುವಾಗ ಇಬ್ಬರೇ ಬಂದಿದ್ದು ಸಹ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅನುಮಾನಗೊಂಡು ಪೃಥ್ವಿರಾಜ್‌ನನ್ನೇ ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ. ಸಮೀರ್‌ಕುಮಾರ್‌ ತಲೆಮರೆಸಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT