ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ರಾಘವೇಂದ್ರ (28) ಎಂಬುವರನ್ನು ರುಂಡ ಕತ್ತರಿಸಿ ಕೊಲೆ ಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಹಳೇ ದ್ವೇಷದಿಂದಾಗಿ ರಾಘವೇಂದ್ರ ಅವರನ್ನು ಏಪ್ರಿಲ್ 11ರಂದು ಕೊಲೆ ಮಾಡಲಾಗಿತ್ತು. ಸಂಬಂಧಿಯೇ ಆಗಿರುವ ಶ್ರೀನಿವಾಸಪುರದ ಹೇಮಣ್ಣ, ವೇಲು ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಟೈಲ್ಸ್ ಜೋಡಣೆ ಕೆಲಸ ಮಾಡುತ್ತಿದ್ದ ರಾಘವೇಂದ್ರ. ಪೋಷಕರಜೊತೆ ವಾಸವಿದ್ದರು. ಅವರಚಿಕ್ಕಪ್ಪಂದಿರಾದ ಮುನಿರಾಜು ಮತ್ತು ಮುನಿಸ್ವಾಮಿ ಕುಟುಂಬದ ನಡುವೆ ವೈಷಮ್ಯವಿತ್ತು.’
‘ಮುನಿಸ್ವಾಮಿ ಹಾಗೂ ಮಗ ವಾಸು ಸೇರಿಕೊಂಡು, ಮುನಿರಾಜು ಅವರನ್ನು ಕೊಂದಿದ್ದರು. ಅವರ ಅಳಿಯನೇ ಆಗಿದ್ದ ಆರೋಪಿ ಹೇಮಣ್ಣನ ಮೇಲೂ ಹಲ್ಲೆ ಮಾಡಿದ್ದರು. ಮುನಿಸ್ವಾಮಿ ಮತ್ತು ವಾಸು ಜೈಲು ಸೇರಿದ್ದರು. ಕಳೆದ ವರ್ಷ ಬಿಡುಗಡೆಯಾಗಿದ್ದರು’ ಎಂದೂ ಪೊಲೀಸರು ತಿಳಿಸಿದರು.
‘ಮುನಿರಾಜು ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಅಳಿಯ ಹೇಮಣ್ಣ ಹಾಗೂ ಇತರರು, ಮುನಿಸ್ವಾಮಿ ಮತ್ತು ವಾಸು ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು. ಗಾಯಗೊಂಡು ಚೇತರಿಸಿಕೊಂಡಿದ್ದ ಮುನಿಸ್ವಾಮಿ ಮತ್ತು ವಾಸು ಊರು ತೊರೆದಿದ್ದರು.’
‘ಜೈಲಿನಿಂದ ಬಿಡುಗಡೆಯಾಗಿದ್ದ ಹೇಮಣ್ಣ, ಕೊಲೆ ಮಾಡಲೆಂದು ಮುನಿಸ್ವಾಮಿ ಮತ್ತು ವಾಸುಗಾಗಿ ಹುಡುಕಾಡುತ್ತಿದ್ದ. ಅವರಿಬ್ಬರುತಲೆಮರೆಸಿಕೊಳ್ಳಲು ರಾಘವೇಂದ್ರ ಸಹಾಯ ಮಾಡಿದ್ದಾನೆಂದು ತಿಳಿದಿದ್ದ. ಅದೇ ಕಾರಣಕ್ಕೆ ರಾಘವೇಂದ್ರನನ್ನೇ ರುಂಡ ಕತ್ತರಿಸಿ ಕೊಂದಿದ್ದ’ಎಂದೂ ಪೊಲೀಸರು ಮಾಹಿತಿ ನೀಡಿದರು.