ಬೆಂಗಳೂರು: ‘ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಸಲು ನಮ್ಮ ಸಂಸ್ಥೆ ಸುಧಾರಿತ ಕ್ರಮಗಳನ್ನು ಅನುಸರಿಸಿದೆ. ತಂತ್ರಜ್ಞಾನ ಆಧರಿತ ಹೈನುಗಾರಿಕೆ ವಿಧಾನ ಅನುಸರಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು. ಇದಕ್ಕಾಗಿ ಸಂಸ್ಥೆಯ ಸಹಕಾರ ಪಡೆಯಬಹುದು’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಹೇಳಿದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ಹಾಗೂರಾಷ್ಟ್ರೀಯ ಪಶು ಪೋಷಣೆ ಮತ್ತು ಶಾರೀರಿಕ ವಿಜ್ಞಾನ ಸಂಸ್ಥೆ (ಎನ್ಐಎಎನ್ಪಿ), ಭಾರತೀಯ ಡೇರಿ ಸಂಘ ಹಾಗೂ ಕೆಎಂಎಫ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕ್ಷೀರ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್ಐಎಎನ್ಪಿ ನಿರ್ದೇಶಕ ರಾಘವೇಂದ್ರ ಭಟ್ಟ, ‘ಹೈನುಗಾರಿಕೆ ವಿಧಾನಗಳ ಬಗ್ಗೆ ನಮ್ಮ ಸಂಸ್ಥೆಯ ವತಿ ಯಿಂದ ಹಲವು ಸಂಶೋಧನೆಗಳು ನಡೆದಿವೆ. ರೈತರು ಅವುಗಳ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದರು.
‘ರಾಜ್ಯದ ವಿವಿಧ ಜಿಲ್ಲೆಗಳ 15 ಡೇರಿಗಳ ವ್ಯಾಪ್ತಿಯ ರೈತರಿಗೆ ಹೈನುಗಾರಿಕೆ ಜ್ಞಾನ ಹೆಚ್ಚಿಸಲು ಗೋಷ್ಠಿ ಹಮ್ಮಿಕೊಳ್ಳಲಾಗಿದೆ’ ಎಂದುಭಾರತೀಯ ಡೇರಿ ಸಂಘದ ದಕ್ಷಿಣ ವಲಯದ ಕಾರ್ಯದರ್ಶಿ ಎನ್.ಕೆ.ಎಸ್.ಗೌಡ ವಿವರಿಸಿದರು.
ಬಿ.ಸಿ.ಸತೀಶ್, ಸ್ಮರಣ ಸಂಚಿಕೆ ಹಾಗೂ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು. ಪ್ರಗತಿಪರ ಹೈನುಗಾರಿಕೆ ಮಾಡುವ ರೈತರಿಗೆ ಗುಣಮಟ್ಟದ ಹಾಲು ಉತ್ಪಾದನೆಗೆ ರೈತಸ್ನೇಹಿ ನವೀನ ತಂತ್ರಜ್ಞಾನಗಳ ಮಾಹಿತಿ ನೀಡುವ ‘ತಾಂತ್ರಿಕ ಗೋಷ್ಠಿ’ ಆಯೋಜಿಸಲಾಗಿತ್ತು.
ಐಡಿಎ ದಕ್ಷಿಣ ವಲಯದ ಅಧ್ಯಕ್ಷ ಸಿ.ಪಿ.ಚಾರ್ಲ್ಸ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಗನ್ನಾಥ್ ರಾವ್ ಇದ್ದರು.