ಬೆಂಗಳೂರು: ಸರ್ಕಾರವು ಬೃಹತ್ ಕೈಗಾರಿಕಾ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳತ್ತ ಮಾತ್ರ ಗಮನ ಹರಿಸುತ್ತಿದೆ. ಜತೆಗೆ, ಮಹಿಳಾ ಉದ್ಯಮಿಗಳ ನೆರವಿಗೂ ಸರ್ಕಾರ ಧಾವಿಸಬೇಕು ಎಂದು ಮಹಿಳಾ ಉದ್ಯಮಿಗಳ ಸಂಘ ಒತ್ತಾಯಿಸಿದೆ.
‘ಕರ್ನಾಟಕ ರಾಜ್ಯ ಹಣಕಾಸು ನಿಗಮವು ಮಹಿಳಾ ಉದ್ಯಮಿಗಳಿಗೆ ಶೇ 4ರ ಬಡ್ಡಿದರದಲ್ಲಿ ₹2 ಕೋಟಿಯವರೆಗೂ ಸಾಲ ನೀಡಿತ್ತು. ಜನವರಿಯಿಂದ ಶೇ 14ರ ಬಡ್ಡಿದರದಲ್ಲಿ ಸಾಲ ಮರುಪಾವತಿಸುವಂತೆ ಹೇಳಿದೆ. ಮಾರ್ಚ್ನಿಂದ ಕೈಗಾರಿಕೆಗಳು ಸ್ಥಗಿತಗೊಂಡಿರುವುದರಿಂದ ಈ ಪ್ರಮಾಣದ ಬಡ್ಡಿ ಪಾವತಿಸಲು ತುಂಬಾ ಸಮಸ್ಯೆಯಾಗಿದೆ’ ಎಂದು ಭಾರತೀಯ ಮಹಿಳಾ ಉದ್ಯಮಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ರೂಪಾ ರಾಣಿ ಹೇಳಿದರು.
‘ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಬಡ್ಡಿ ದರವನ್ನು ಶೇ 14ಕ್ಕೆ ಏರಿಸಿರುವುದರಿಂದ ಯೋಜನೆಯ ಉದ್ದೇಶವೇ ಸಫಲವಾಗುವುದಿಲ್ಲ. ಈ ನಿರ್ಧಾರವನ್ನು ವಾಪಸ್ ತೆಗೆದುಕೊಂಡು ಮಹಿಳೆಯರು ನಡೆಸುವ ಉದ್ಯಮಗಳಿಗೆ ನೆರವಿನ ಪ್ಯಾಕೇಜ್ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.
ಬಡ್ಡಿರಹಿತ ಸಾಲ ನೀಡಿ
‘ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲ ನೀಡಬೇಕು. ಮಹಿಳೆಯರು ನಡೆಸುವ ಉದ್ಯಮಗಳು ಅಸಂಘಟಿತ ವಲಯದಲ್ಲಿವೆ. ಇಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರವೇ ವೇತನವನ್ನು (ಲಾಕ್ಡೌನ್ ಅವಧಿ) ನೀಡಬೇಕು’ ಎಂದು ಅವರು ಒತ್ತಾಯಿಸಿದರು.