ಕೆಂಗೇರಿ: ‘ಜಾತಿಗೊಂದು ಪ್ರಾಧಿಕಾರ ರಚನೆ ಮಾಡುವ ಸರ್ಕಾರ, ಕವಿಗಳ ಅಧ್ಯಯನ ಪೀಠ ಸ್ಥಾಪನೆಗೆ ಗಾಢ ಮೌನ ವಹಿಸಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರ ಜಿಲ್ಲಾಧ್ಯಕ್ಷ ಎಂ. ಪ್ರಕಾಶ್ಮೂರ್ತಿ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ ಅವರ 8ನೇ ಸಂಸ್ಮರಣೆ ಅಂಗವಾಗಿ ಕಲಾಗ್ರಾಮದಲ್ಲಿರುವ ಅವರ ಅಂತ್ಯಕ್ರಿಯೆ ಕಟ್ಟೆ ಬಳಿ ಆಯೋಜಿಸಲಾಗಿದ್ದ ಕವಿ ಸ್ಮರಣೆ ದಿನ, ಗೀತಗಾಯನ, ಕವಿಗೋಷ್ಠಿ ಹಾಗೂ ಸಾಹಿತ್ಯ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದ ಸಮೃದ್ದಿಗೆ ಕವಿಗಳ ಕೊಡುಗೆ ಇಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ರಾಜಕೀಯ ಹಾಗೂ ಆರ್ಥಿಕ ಲಾಭದ ಲೆಕ್ಕಾಚಾರದಲ್ಲಿ ಮುಳುಗಿರುವ ರಾಜಕೀಯ ನಾಯಕರು ಕವಿಗಳ ಸಾಧನೆಯನ್ನು ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು.
‘ತೋರಿಕೆಗಾಗಿ ಕಾಡಿನಂತಹ ಪ್ರದೇಶದಲ್ಲಿ ಕವಿಗಳ ಸ್ಮಾರಕ ಮಾಡುವ ಬದಲು ಅವರವರ ಜನ್ನಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಿದರೆ ಸ್ಮಾರಕವು ಸುಸ್ಥಿಯಲ್ಲಿರುತ್ತದೆ. ಪ್ರವಾಸೋದ್ಯಮವೂ ಬೆಳೆಯುತ್ತದೆ’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಮನೆ ಹರಿಹರ ಪ್ರಿಯ ಮಾತನಾಡಿ, ಖುದ್ದು ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಮಾಧಿಯಂತಹ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇರಲಿಲ್ಲ ಎಂದರು.