ಬೆಂಗಳೂರು: ಲಾಕ್ಡೌನ್ ಸಡಿಲಿಕೆ ನಂತರ ನಗರದಲ್ಲಿ ಬಹುತೇಕ ವಹಿವಾಟು ಆರಂಭವಾಗಿದೆ. ಭಾನುವಾರ ರಜೆ ದಿನವಾಗಿದ್ದರಿಂದ ಶನಿವಾರ ರಾತ್ರಿಯೇ ಹಲವರು ತಮ್ಮೂರಿನತ್ತ ವಾಹನಗಳಲ್ಲಿ ಹೊರಟರು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪೀಣ್ಯ, ಜಾಲಹಳ್ಳಿ, ನೆಲಮಂಗಲ ಬಳಿ ವಿಪರೀತ ದಟ್ಟಣೆ ಉಂಟಾಯಿತು.
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೇ 15ರಿಂದ ಪುನಃ ಲಾಕ್ಡೌನ್ ಮಾಡುವ ಸುದ್ದಿಯೂ ಎಲ್ಲೆಡೆ ಹರಿದಾಡುತ್ತಿದೆ. ಇದರಿಂದಲೂ ಹಲವರು, ಬೆಂಗಳೂರು ಬಿಟ್ಟು ಊರಿನತ್ತ ಹೊರಟರು.
ನೆಲಮಂಗಲ ಟೋಲ್ಗೇಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಾರು, ಬೈಕ್ ಹಾಗೂ ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚಿತ್ತು. ಅಲ್ಲೆಲ್ಲ ಸಂಚಾರ ದಟ್ಟಣೆ ಉಂಟಾಯಿತು. ವಾಹನಗಳು ನಿಧಾನಗತಿಯಲ್ಲಿ ಚಲಿಸಿದವು.