ಕೆಂಗೇರಿ: ‘ನೂತನ ರಾಷ್ಟೀಯ ಶಿಕ್ಷಣ ನೀತಿಯು ಜ್ಞಾನಾರ್ಜನೆಯೊಂದಿಗೆ, ಉದ್ಯೋಗಾವಕಾಶ ಮತ್ತು ಕೌಶಲ ನೀಡುವ ಶಕ್ತಿ ಹೊಂದಿದೆ’ ಎಂದು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ರಾಮಚಂದ್ರಗೌಡ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಯುನಿರ್ವಸಿಟಿ ಟೀಚರ್ ಕೌನ್ಸಿಲ್ ಫಾರ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ (ಬಿಯು ಟಿಸಿಸಿಎಮ್) ಸಹಯೋಗದಲ್ಲಿ ಇಲ್ಲಿನ ಶೇಷಾದ್ರಿಪುರ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟೀಯ ಶಿಕ್ಷಣ ನೀತಿ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಲೇಜು ಕೇಂದ್ರೀತ ವಾಗಿದ್ದ ಶಿಕ್ಷಣ ಕ್ರಮ ಹಾಗೂ ಅಧ್ಯಯನ ವಿಷಯಗಳು ನೂತನ ರಾಷ್ಟ್ರೀಯ ಶಿಕ್ಷಣದಡಿ ವಿದ್ಯಾರ್ಥಿ ಕೇಂದ್ರಿತವಾಗಿ ಮಾರ್ಪಾಡಾಗಲಿವೆ. ವಿದ್ಯಾರ್ಥಿಗಳು ಸೂಚಿತ ವಿಷಯಗಳೊಂದಿಗೆ ತಮ್ಮಿಚ್ಛೆಯ ವಿಷಯಗಳನ್ನು ಒಂದೇ ಬಾರಿಗೆ 60:40 ರ ಅನುಪಾತದಲ್ಲಿ ಅಧ್ಯಯನ ಮಾಡಲು ಅವಕಾಶ ದೊರಕುತ್ತದೆ’ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ಅನಿತಾ ಎಚ್.ಎಸ್., ‘ನೂತನ ನೀತಿಗಳನ್ನು ಜಾರಿಗೆ ತರುವಾಗ ಅಡ್ಡಿಗಳು ಸಹಜ. ಉನ್ನತಿಯತ್ತ ಸಾಗಲು ಅಗತ್ಯ ಬದಲಾವಣೆಯನ್ನು ಅಪ್ಪಿ ಕೊಳ್ಳುವುದು ಅನಿವಾರ್ಯ. ಇದರಿಂದ ಶೈಕ್ಷಣಿಕ ರಂಗ ಮತ್ತಷ್ಟು ಅಭ್ಯುದಯ ಹೊಂದಲು ಸಾಧ್ಯವಾಗಲಿದೆ’ ಎಂದು ಹೇಳಿದರು.
ಶೇಷಾದ್ರಿಪುರ ಶಿಕ್ಷಣ ದತ್ತಿ ಕಾರ್ಯದರ್ಶಿ ವೂಡೇ ಪಿ.ಕೃಷ್ಣಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ನಿರ್ಮಲಾ, ಬಿಯುಟಿಸಿಸಿಎಂ ಸಮಿತಿಯ ಡಾ.ಕರುಣಾಕರ ರೆಡ್ಡಿ, ಡಾ.ಮೊಹಮ್ಮದ್ ಫಾರೂಕ್ ಪಾಷಾ, ಡಾ. ಚೇತನಾ ಎಂ., ಕಾಲೇಜು ಪ್ರಾಂಶು ಪಾಲ ಪ್ರೊ.ಜಯರಾಮ್, ಸೌಮ್ಯಾ ಡಿ.ಎನ್. ಪಾಲ್ಗೊಂಡಿದ್ದರು.