ಬೆಂಗಳೂರು: ನದಿ ಪಾತ್ರಗಳಲ್ಲಿ, ಪಟ್ಟಾ ಭೂಮಿ, ಕೆರೆ, ಗ್ರಾಮೀಣ ಪ್ರದೇಶದ ಹಳ್ಳ ಕೊಳ್ಳಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು. ಸರ್ಕಾರವೇ ಮರಳು ಬ್ಲಾಕ್ಗಳನ್ನು ಗುರುತಿಸಿಅದನ್ನು ತೆಗೆಯಲು ಅವಕಾಶ ನೀಡುತ್ತದೆ ಎಂದು ವಿವರಿಸಿದರು.
ಮರಳು ಪ್ರತಿ ಮೆಟ್ರಿಕ್ ಟನ್ಗೆ ₹ 700 ರಂತೆ ನಿಗದಿ ಮಾಡಲಾಗುವುದು. ಈ ಮರಳನ್ನು ಜನತಾ ಮನೆ, ಸಣ್ಣ ಪುಟ್ಟ ನಿರ್ಮಾಣ ಕಾರ್ಯಗಳಿಗೆ ಬಳಸಬಹುದು. ಜಿಲ್ಲಾ ದಂಡಾಧಿಕಾರಿಗಳು ಮತ್ತು ಎಇಇಗಳ ಸಮನ್ವಯದ ಮೂಲಕ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳಲಿದೆ. ಬೇಕಾಬಿಟ್ಟಿ ಮಾರಾಟಕ್ಕೆ ಮತ್ತು ದರ ನಿಗದಿ ಮಾಡುವುದಕ್ಕೂ ಅವಕಾಶವಿಲ್ಲ ಇರುವುದಿಲ್ಲ ಎಂದು ಅವರು ಹೇಳಿದರು.
ಹೊಸ ನೀತಿಯಿಂದ ಸರ್ಕಾರಕ್ಕೆ ಸುಮಾರು ₹200 ಕೋಟಿ ರಾಜಸ್ವ ನಿರೀಕ್ಷಿಸಲಾಗಿದೆ. ಹಿಂದೆ ₹130 ಕೋಟಿ ಸಿಗುತ್ತಿತ್ತು. ₹ 70 ಕೋಟಿಗಳಷ್ಟು ಹೆಚ್ಚು ಆದಾಯ ಸಿಗುತ್ತದೆ ಎಂದು ಮಾಧುಸ್ವಾಮಿ ವಿವರಿಸಿದರು.
ಜನ ಕಟ್ಟಿಕೊಂಡು ತಿರುಗಬೇಡಿ: ಸಚಿವರು ಎಲ್ಲೆಂದರಲ್ಲಿ ಜನ ಸೇರಿಸುವುದು, ಗುಂಪು ಕಟ್ಟಿಕೊಂಡು ಹೋಗಬೇಡಿ. ಕೊರೊನಾ ಸೋಂಕು ತಗುಲಿದರೆ ಕಷ್ಟವಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಎಲ್ಲ ಕಡೆಗಳಲ್ಲೂ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಿ ಎಂದು ಸಂಪುಟ ಸಭೆಯಲ್ಲಿ ಸಚಿವರಿಗೆ ಕಿವಿ ಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಇತರ ತೀರ್ಮಾನಗಳು
*ನಾಗರಿಕ ಸೇವಾ ವರ್ಗೀಕರಣದಡಿ ಶಿಸ್ತು ಕ್ರಮಕ್ಕೊಳಗಾದ ನೌಕರರಿಗೆ ಶಿಕ್ಷೆ ಪ್ರಮಾಣ ನಿಗದಿ.
*ಶಿಕ್ಷಣ ಇಲಾಖೆಯಲ್ಲಿ ಸಂಬಳ ಬಿಡುಗಡೆ ಮಾಡಲು ಲೆಕ್ಕ ಶೀರ್ಷಿಕೆಯನ್ನು ಬದಲಿಸಬೇಕಾದ ಅನಿವಾರ್ಯ ಸ್ಥಿತಿ ಬಂದಿದ್ದರಿಂದ ನಾಲ್ವರು ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಲೋಕಾಯುಕ್ತ ತನಿಖೆ ನಡೆಸಲಾಗಿತ್ತು. ಸರ್ಕಾರದ ಹಿತದೃಷ್ಟಿಯಿಂದಾಗಿ ಅವರು ಈ ಕ್ರಮ ಕೈಗೊಂಡಿದ್ದರಿಂದ ಈ ಅಧಿಕಾರಿಗಳ ಮೇಲೆ ಕ್ರಮ ಕೈಬಿಡಲು ತೀರ್ಮಾನ.