ಬೆಂಗಳೂರು: 2022ರ ಹೊಸ ವರ್ಷವನ್ನು ಸ್ವಾಗತಿಸಲು ನಗರದ ಹಲವೆಡೆ ಸಿದ್ಧತೆಗಳು ನಡೆಯುತ್ತಿದ್ದು, ಕೋವಿಡ್ ಕಾರಣದಿಂದ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.
ಓಮೈಕ್ರಾನ್ ತಳಿಯ ಸೋಂಕು ಹರಡದಂತೆ ನಗರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಲವು ನಿಯಮಗಳನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಹಾಗೂ ಪ್ರಕರಣ ದಾಖಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ವರ್ಷಾಚರಣೆ ಬಗ್ಗೆ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಪ್ರತಿ ವರ್ಷದಂತೆ ಈ ವರ್ಷವೂ ನಗರದ ಎಲ್ಲ ಕಡೆ ಬಿಗಿ ಭದ್ರತೆ ಇರಲಿದೆ. ಈ ಬಗ್ಗೆ ಡಿಸಿಪಿಗಳ ಸಭೆ ನಡೆಸಲಾಗುವುದು. ವರ್ಷಾಚರಣೆ ಬಗ್ಗೆ ಸರ್ಕಾರ ಹೊರಡಿಸುವ ಆದೇಶಗಳನ್ನು ಪಾಲಿಸಲಾಗುವುದು’ ಎಂದರು.
‘ಕ್ರಿಸ್ಮಸ್ ಹಬ್ಬವೂ ಹತ್ತಿರದಲ್ಲಿದ್ದು, ಸರ್ಕಾರದ ನಿಯಮಗಳನ್ವಯ ಆಚರಣೆಗೆ ಅವಕಾಶ ನೀಡಲಾಗುವುದು’ ಎಂದೂ ಹೇಳಿದರು.