ಪುಣೆ: ‘ಮೀಸಲಾತಿ ಕುರಿತು ಸರ್ಕಾರ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದೆ’ ಎಂದು ಭಾರಿಪ್ ಬಹುಜನ ಮಹಾಸಂಘದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಟೀಕಿಸಿದರು.
ಭಾನುವಾರ ಇಲ್ಲಿ ನಡೆದ ಅಲೆಮಾರಿ ಬುಡಕಟ್ಟು ಸಂಘಟನೆಗಳ ಸಮಾವೇಶದಲ್ಲಿ ಮಾತನಾಡಿದ ಅವರು, ’ಮೀಸಲಾತಿಯನ್ನು ಕೊನೆಗೊಳಿಸುವಂತೆ ಮಧ್ಯಪ್ರದೇಶದಲ್ಲಿ ಆರ್ಎಸ್ಎಸ್, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಯಜ್ಞ, ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಮೀಸಲಾತಿ ವಿರೋಧಿ ಲಾಬಿಯನ್ನು ಮೀಸಲಾತಿ ಪರ ಇರುವವರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ಈ ರೀತಿಯ ಬೆಳವಣಿಗೆಯಿಂದ ಮೀಸಲಾತಿ ಪರ ಮತ್ತು ವಿರೋಧ ಇರುವವರ ನಡುವೆ ಗಲಭೆ ನಡೆಯುವ ಸಾಧ್ಯತೆ ಇದೆ ಎನ್ನುವ ಆತಂಕ ನನ್ನದು. ಮೀಸಲಾತಿ ವಿಷಯದಲ್ಲಿ ಗಲಭೆಯಾಗಬೇಕು ಎಂದು ಸರ್ಕಾರ ಬಯಸುತ್ತದೆ. ಇದು ಸರ್ಕಾರದ ಕಾರ್ಯಸೂಚಿಯೂ ಆಗಿದೆ. ಹೀಗಾಗಿ, ಯಾವುದೇ ಪ್ರಚೋದನೆಗಳಿಗೆ ದಲಿತರು ಪ್ರತಿಕ್ರಿಯಿಸಬಾರದು’ ಎಂದು ಸಲಹೆ ನೀಡಿದರು.